Thursday 12 September 2013

ಶ್ರೀರಾಮ ಭಕ್ತಿಸಾರ ಶತಕವು [ಸಂಗ್ರಹ]

    ಕಾವ್ಯದ ಬಗ್ಗೆ  ಒಂದಿಷ್ಟು :-
"ಶ್ರೀರಾಮ ಭಕ್ತಿಸಾರ ಶತಕವೆಂಬ ಕಾವ್ಯವು  1960 ನೇ  ಇಸವಿಯಲ್ಲಿ ಕೆ.ಯನ್.ನರಸಪ್ಪ ಶೆಟ್ಟಿ ;ಪುಸ್ತಕ ವ್ಯಾಪಾರಿಗಳು; ಹಿರಿಯೂರು;ಚಿತ್ರದುರ್ಗ ಇವರು ಪ್ರಕಟಿಸಿದ್ದ ಶ್ರೀ ಕೆ.ಯನ್.ಲಕ್ಶ್ಮೀನಾರಾಯಣ ರಾವ್ ಎಂಬರುವರು ಪರಿಷ್ಕರಿಸಿದ ಕಾವ್ಯದ ಯಥಾವತ್ ಸಂಗ್ರಹವಾಗಿದೆ. ಈ ಹೊತ್ತಗೆಯು ಇಂದು ಮಾರು ಕಟ್ಟೆಯಲ್ಲಿ ಲಭ್ಯವಿಲ್ಲದ ಕಾರಣ ಒಂದು ಉತ್ತಮ ಕಾವ್ಯ ಸಾಹಿತ್ಯ ಪ್ರಪಂಚದಿಂದ ಕಾಣೆಯಾಗಬಾರದು ಎಂಬ ಏಕೈಕ ಉದ್ದೇಶದಿಂದ ಇಲ್ಲಿ ಯಥಾವತ್ ಸಂಗ್ರಹಿಸಲಾಗಿದೆ.
.
            
                ||ಶ್ರೀರಸ್ತು||

               ||ಶುಭಮಸ್ತು||

     || ಶ್ರೀರಾಮ ಭಕ್ತಿಸಾರ ಶತಕವು ||
     ************************
     ************************

ಶುಕ್ಲಾಂಬರಧರಂ ವಿಷ್ಣುಂ ಶಶಿವರ್ಣಂ ಚತುರ್ಭುಜಂ|
ಪ್ರಸನ್ನವದನಂ ಧ್ಯಾಯೇತ್ಸರ್ವ ವಿಘ್ನೋಪಶಾಂತಯೇ ||

ಸರ್ವವಿಘ್ನ ಪ್ರಶಮನಂ ಸರ್ವಸಿದ್ಧಿಕರಂಪರಮ್ |
ಸರ್ವಜೀವ ಪ್ರಣೇತಾರಂ ವನ್ದೇವಿಜಯದಂ ಹರಿಮ್ ||

ಶ್ರೀ ರಮಣ ತವಪದ ಚರಿತ್ರದ
ಸಾರವೆನಗೊಲಿದಿತ್ತು ಕರುಣದಿ ಆ
ದರಿಸಿ ಈ ಭಕ್ತಿಸಾರದೊಳ್ನೀನೆ ನೆಲೆಗೊಂಡು |
ವಾರಿಜೋದ್ಭವ ಇಂದ್ರ ವಂದಿತ
ಪಾರ ಪಾವನವೆಂಬ ಚರ್ಯದೊ
ಳ್ಭೋರೆನುತ ಗೋಕ್ಷೀರ ದೊಲೆರಡಕ್ಷರದ ಚರ‍್ಯ ||೧||

ಕೃತ್ತಿವಾಸನ ಪುತ್ರದಯದಿಂ
ಮತ್ತೆ ಮಮತೆಯೊಳೊಲಿದು ಮತಿಯನು
ಇತ್ತು ಬೇಗನೆ ಯೀ ಕೃತಿಯ ಸರ್ವೋತ್ತಮನೇ ಸಲಹೋ|
ಅರ್ಥಿಯಿಂ ಈ ಭಕ್ತಿಸಾರವ
ವಿಸ್ತರಿಪೆ ಸುಜನರಿಗೆ ಬೇಗ ಪ್ರ
ಶಸ್ತದಿಂ ವಿಘ್ನೇಶ ರಕ್ಷಿಸು ನಮ್ಮನನವರತ ||೨||

ಆದಿ ಬ್ರಹ್ಮನ ರಾಣಿ ಸುಂದರಿ
ನಾದಬಿಂದು ಕಳಾ ಮನೋಹರಿ
ವೇದನುತೆ ಗಾಯತ್ರಿ ವಿಶ್ವವಿನೋದ ವಂದಿತೆಯೆ |
ಭೇದವಿಡದೀ ಭಕ್ತಿಸಾರವ
ಓದಿ ಲಾಲಿಪರಿಂಗೆ ಉಚಿತವ
ಆದರಿಸಿ ಕರುಣದಲಿ ರಕ್ಷಿಸು ನಮ್ಮನನವರತ ||೩||

ಪಕ್ಷಿವಾಹನ ಸಜ್ಜನಾಶ್ರಿತ
ರಕ್ಷ ಪಾಂಡವ ಪಕ್ಷ ಕರುಣ ಕ
ಟಾಕ್ಷ ಕೌಸ್ತುಭವಕ್ಷ ತಾ ಶ್ರೀವತ್ಸ ಘನ ವಕ್ಷ |
ವೃಕ್ಷ ಪುರಿಗಾಧ್ಯಕ್ಷ ಶುಭಫಲ
ಮೋಕ್ಷ ವರ ನಿಟಿಲಾಕ್ಷನುತ ಕಮ
ಲಾಕ್ಷ ಕ್ರತು ಸಂರಕ್ಷ ರಕ್ಷಿಸು ನಮ್ಮನನವರತ ||೪||

ವಂದನವು ನಿನಗೀಗ ನೀ ಶಿಖಿ
ಮಂದಿರದಿ ನಿಂದಿರುವ ನರಹರಿ
ಹಿಂದೆ ಕಂದನ ಕಾಯ್ದ ತೆರದಿ ಮುಕುಂದ ಕರುಣದಲಿ |
ಇಂದು ಭಕ್ತಿಯೊಳ್ಭಕ್ತಿಸಾರವ
ದೊಂದು ಚರಿತವ ವಿರಚಿಸುವೆ ಗೋ
ವಿಂದ ಮಾಧವ ವಿಷ್ಣು ರಕ್ಷಿಸು ನಮ್ಮನನವರತ ||೫||


ವೇದವಂದಿತ ವಿಶ್ವಪುಂಜದ
ನಾದ ಬಿಂದು ಕಳಾ ಮನೋಹರ
ಆದಿ ಮೂಲ ಪ್ರಕೃತಿ ಮದಪುರಧೀಶ ಮಲ್ಲೇಶ |
ಮಾಧವ ಪ್ರಿಯ ಮಧುರ ಭಾಷ ವಿ
ನೋದ ಭದ್ರೈಕ ರುದ್ರ ತವಚರ
ಣ ದ್ವಯವ ನಂಬಿದೆನು ರಕ್ಷಿಸು ನಮ್ಮನನವರತ ||೬||

ಬಾಳ ಬಟ್ಟು ತ್ರಿಶೂಲ ಢಮರುಗ
ಮೇಳದಿಂ ಝಾಳಿಸುವ ಖಡ್ಗದಿ
ಕಾಳ ರಕ್ಷಸರನ್ನು ಮರ್ದಿಪ ವರ ಮಹಂಕಾಳೀ |
ವ್ಯಾಳ ಭೂಷಣ ನರಸಿ ಕರುಣವ
ತಾಳಿ ಶ್ರೀ ತರುರೊಳಿಹ ಕೆಂ
ಜಾಳಿ ದುರ್ಗಾಂಬಿಕೆಯೇ ರಕ್ಷಿಸು ನಮ್ಮನನವರತ ||೭||

ಧರೆಯೊಳ್ಕರಿಪುರದೊರೆಯ ರಂಗನ
ಸಿರಿ ಚರಣ ಕಮಲಾಬ್ಜ ಭೃಂಗನು
ನರಸಕವಿ ವಿರಸಿಸುವ ಹರಿಪದ ಭಕ್ತಿ ಸಾರವನು |
ಕರುಣದಲಿ ಶ್ರೀರಾಮ ಯೆನಗೆಯು
ಅರುಹಿದ ತೆರದಿ ರಚಿಸಿದೆ ಸಿರಿ
ಯರಸ ಶ್ರೀ ರಘುರಾಮ ರಕ್ಷಿಸು ನಮ್ಮನನವರತ ||೮||

ಮತಿಯುತರು ಶ್ರೀರಾಮ ಚರಿತದಿ
ಅತಿ ಹಿತದಿ ಮನವಿಟ್ಟು ಸುಜನರು
ಖತಿಯ ತಾಳದೆ ಲಾಲಿಪುದು ಈ ಕೃತಿಯ ಕರುಣದಲಿ |
ಯತಿಯ ಪ್ರಾಸಗಳರಿಯೆ ಮತಿಯನು
ಅತಿ ಹಿತದಿ ನೀನಿತ್ತು ಕರುಣದಿ 
ಪತಿತಪಾವನ ನುಡಿಪೆ ರಕ್ಷಿಸು ನಮ್ಮನನವರತ ||೯||

ರತಿಯ ಪತಿ ಪಿತ ನೀನೊಲಿದು ಸ
ದ್ಗತಿಯ ಕರುಣಿಪುದೆಂದು ದುಷ್ಕೃತಿ
ತತಿಯ ಮನಸಿಗೆ ತಾರದಲೆ ಶ್ರೀರಾಮ ರಕ್ಷಿಸುವುದು |
ಸತತ ಹೃದಯದಲಿರ್ದು ರಘುಪತಿ
ಹಿತದಿ ನಿನ್ನಯ ನಾಮ ಜಿಹ್ವೆಯೊ
ಳತಿಶಯದಿ ನುಡಿಪಂತೆ ರಕ್ಷಿಸು ನಮ್ಮನನವರತ ||೧೦||



ವಸುಮತಿಯ ಭಾರವನು ಕಳೆಯಲು 
ದಶರಥನ ಗರ್ಭದೊಳಗುದಿಸಿದೆ
ಯಸೆವ ಸೇವೋಚ್ಚರಿತ ಲಕ್ಷ್ಮಣ ಭರತ ಶತೃಘ್ನ |
ಮಿಸುಪ ಸತ್ಯ ಸ್ಕಂದರಿಗೆ ನೀ
ರಸಿಕ ತನದಿ ಸಹೋದರನು ಎ
ನಿಸುವ ನೀ ಶ್ರೀರಾಮ ರಕ್ಷಿಸು ನಮ್ಮನನವರತ ||೧೧||

ತರಣಿ ವಂಶಜ ನೆನಿಪ ಕರುಣಾ
ಶರಧಿ ತಾಟಕಿಯನ್ನು ಸಂಹರಿಸಿ
ವರ ಮುನಿಪೋತ್ತಮನ ಕ್ರತುವನ ಇರದೆ ರಕ್ಷಿಸುತ |
ಇರಲು ಸುರ ಮುನಿವರರು ಮುಖ್ಯರು
ಹರುಷ ಪುಳಕಿತರಾದರಾಕ್ಷಣ
ಸರಸಿಜಾಕ್ಷಕ ರಾಮ ರಕ್ಷಿಸು ನಮ್ಮನನವರತ ||೧೨||

ಹರನ ಚಾಪವ ಜನಕ ಚಕ್ರಿಯು
ಪರಮ ಹರುಷಿತನಾಗಿ ಮಂತ್ರ
ಸ್ಫುರಿತದಿಂದಾ ವಾಹನೆಯ ವಿಸ್ತರಿಸಿ ಬಳಿಕಿನಲಿ |
ಇರದೆ ರಾಜಿಪ ರಾಯಭಾರದ
ದೊರೆಗಳೆಲ್ಲರ ಕರೆಸಲಾಕ್ಷಣ
ತೆರಳ್ದಾತ ಮುನಿಯೊಡನೆ ರಕ್ಷಿಸು ನಮ್ಮನನವರತ ||೧೩||

ದಶಶಿರನು ಮೊದಲಾದ ಸಕಲರು
ಅಸಮ ಶೌರ‍್ಯದ ವೀರರೆಲ್ಲರು
ಕುಸಿದು ಪೋದರು ಸಿಖಿಯ ನೇತ್ರನ ಚಾಪದೆದುರುಬೆಯಲಿ |
ಕುಸುಮ ಶರಪಿತ ವಾಮ ಭಾಗದೊ
ಳೆಸೆವ ಲಕ್ಷ್ಮಣ ವೀಕ್ಷಿಸಲು ಮಿಗೆ
ಶಶಿಧರನ ಬಿಲ್ಲುಡಿದೆ ರಕ್ಷಿಸು ನಮ್ಮನನವರತ ||೧೪||

ಹರನ ಚಾಪದ ಹರುಷದಿಂದಲಿ
ಧರಣಿಜೆಯ ನೀನೊಲಿಸಿ ನಿನ್ನ
ವರಾದ ಭರತ ಸುಲಕ್ಷ್ಮಣ ಶತೃಘ್ನರಿಗೆ ಬಳಿಕ |
ಪರಮ ಸಂತೋಷದಲಿ ಮದುವೆಯ
ವಿರಚಿಸಿದ ಪರಮಾತ್ಮನೆಂದೆ
ನಿರುತ ನಂಬಿದೆ ರಾಮ ರಕ್ಷಿಸು ನಮ್ಮನನವರತ ||೧೫|| 



ಭೂಮಿಜೆಯಪಿತ ಜನಕ ಚಕ್ರಿಯು
ತಾ ಮನೋಹರದಿಂದ ನಮಿಸಿದ
ಪ್ರೇಮದಲಿ ದಶರಥಗೆ ನೂತನ ವಸ್ತ್ರ ಕಾಣಿಕೆಯ |
ಆ ಮಹಾದಳ ಸೈನ್ಯಕೆಲ್ಲಕೆ 
ಕಾಮಿತಾರ್ಥವ ಸಲಿಸಿ ತೆರಳಿದೆ
ಭೂಮಿಜೆಯ ನೊಡಗೊಂಡು ರಕ್ಷಿಸು ನಮ್ಮನನವರತ ||೧೬||

ಬರುತ ಮಾರ್ಗದಿ ಭಾರ್ಗವನ ತಡೆ
ದುರುತರದ ಚಾಪವನು ಖಂಡಿಸಿ
ಹರುಷದಿಂದ ಅಯೋಧ್ಯಪುರ ಬಳಿಗಾಗಲೈ ತಂದು |
ಸರಸದಲಿ ಭೂಮಿಜೆಯ ಪಿತರುಗ
ಳ್ಹರುಷ ಪುಳಕಿತರಾಗಲಾಗುಪ
ಚರಿಪವರ ರಘುರಾಮ ರಕ್ಷಿಸು ನಮ್ಮನನವರತ ||೧೭|

ಶುಭಮುಹೂರ್ತದೊಳಾಪುರಕೆ
ತ್ರಿಭುವನ ವಿಭುವೆನಿಪ ಶ್ರೀರಾಮ
ಅಭುಜ ಮುಖಿ ಸೀತಾದೇವಿಯೊಡನಂದಣವನೇರಿ |
ಅಬುದಿ ಸಮಗುಣವನು ಜರಿದಿರಲಿ
ಅಭವ ಸಖನೈತರಲು ದುಂಧುಭಿ
ರಭಸದೊಡನೈ ತಂದೆ ರಕ್ಷಿಸು ನಮ್ಮನನವರತ ||೧೮||

ಸಗರವಂಶೋದ್ಭವರ ಭವನಕೆ
ಸುಗುಣೆಯರು ಶೃಂಗಾರದಾರತಿ
ಅಗರು ಚಂದನ ರಧಿಕಗಂಧವ ಪರಿಮಳೊದಕದ |
ಮಗುಳೆ ಅವರಿವರು ಭಯರಭಸದಿ
ಬಗೆ ಬಗೆಯ ಶೃಂಗಾರದೊಗುಮಿಗೆ
ನೆಗಹೆ ನಗುತಿರ್ದಾತ ರಕ್ಷಿಸು ನಮ್ಮನನವರತ ||೧೯||

ಹರುಷದಿಂದಲಿ ಗೃಹಪ್ರವೇಶವ
ಸರಸ ಪೂರ್ವಕದಿಂದ ರಚಿಸಲು
ಪರಮಮುನಿಗಳು ವೆರಸಿ ಬರುತಿಹ ಗುರುಗಳೀಕ್ಷಿಸುತ |
ಗುರು ವಶಿಷ್ಠರ ಪರಮಮುನಿಗಳು
ಹಿರಿಯ ಭೂಸುರರುಗಳ ಸತ್ಕರಿಸಿ
ಹರುಷದಿಂದೆಂದಾತ ರಕ್ಷಿಸು ನಮ್ಮನನವರತ ||೨೦||



ಸರಸವೆಸೆಯುತ ಜನಕ ಚಕ್ರಗೆ
ಹರುಷ ರಸದಲಿ ದಶರಥೇಶ್ವರ
ಉರುತರದ ಸನ್ಮಾನವವರಿಗೆ ವಿರಚಿಸುತ ಬೇಗ |
ತರಣಿವಂಶದ ತನಯರಿಗೆ ವುರು
ತರ ವಿವಾಹ ಮುಹೂರ್ತವನು
ವಿರಚಿಸಿದರೆಂದಾ ರಾಮ ರಕ್ಷಿಸಿ ನಮ್ಮನನವರತ ||೨೧||

ಮಿಂದು ಮಂಗಳ ನಡಸಿ ಗಂಧವ
ಚಂದದಿಂ ಸಡಗರದಿ ನೂತನ
ಚಂದ್ರಗಾಮಿಯ ಪೊದಿಸಿ ಸಂಭ್ರಮದಿಂದ ದಶರಥನು |
ಅಂದು ಜನಕ ನೃಪಾಲ ಗುರುಗಳಿ
ಗೊಂದನೆಯ ವಿರಚಿಸುತ ದಯವಿರ
ಲೆಂದು ಪೇಳ್ದನ ಕಂದ ರಕ್ಷಿಸು ನಮ್ಮನನವರತ ||೨೨||

ಸೃಷ್ಟಿಪತಿ ರಾಮನಿಗೆ ಪಟ್ಟವ 
ಕಟ್ಟಬೇಕೆಂಬ ಯತ್ನವ
ದಿಟ್ಟ ಮಂದರೆ ಕೈಕೆಯೊಳು ತಾನಿಷ್ಟು ವಿರಚಿಸಲು |
ಪಟ್ಟವನು ಭರತನಿಗೆ ಕಟ್ಟಿಸು
ಸೃಷ್ಟಿಗೊಡೆಯನ ವನಕೆ ಕಳುಹೆನೆ
ದಿಟ್ಟತನದಲಿ ಕೆರಳ್ದೆ ರಕ್ಷಿಸು ನಮ್ಮನನವರತ ||೨೩||

ಚಿತ್ರ ಕೂಟದೊಳಿರುತ ಪಿತ ಸ್ವ
ರ್ಗಸ್ಥನಾದನು ಎಂಬ ವಾರ್ತೆಯ
ಮತ್ತೆ ಭರತಾದಿಗಳು ಮುಖ್ಯರು ವಿಸ್ತರಿಸೆ ಬಳಿಕ |
ಕರ್ತು ಕರ್ಮವನುನಡೆಸಿ ಭರತಗೆ 
ಅರ್ಥಿಯಿಂ ಪಾದುಕೆಯನಿತ್ತ
ಮೂರ್ತಿ ಶ್ರೀ ರಘುರಾಮ ರಕ್ಷಿಸು ನಮ್ಮನನವರತ ||೨೪||

ಮುಂದೆ ವರಶರ ಭಂಗನಾಶ್ರಮ
ದಿಂದ ಘೋರಾರಣ್ಯ ಕೈತರ
ಲಂದು ಹಿಂದಕೆ ತಿರುಗಿ ನೋಡಿದ 
ಡಂದು ಸೀತೆಯ ಹವಣ ಕಾಣುತ 
ಲಂದು ತಮ್ಮಗೆ ಪೇಳ್ದೆ ರಕ್ಷಿಸು ನಮ್ಮನನವರತ ||೨೫||



ತಮ್ಮ ಸೀತೆಯ ಭ್ರಮೆಯ ನೋಡಿದ
ಡುಮ್ಮಳಿಸುತಿಹ ಮುಖದ ಬೆಮರನು
ನೆಮ್ಮದಿಯೊಳಿರುವಂತ ಪ್ರಾಪ್ತಿಯ ಫಲವು ಎಮಗಿಲ್ಲ |
ಈ ಮಹಿಮೆಯೊಳ್ಕೇಳೆಮ್ಮ ಕಷ್ಟವ
ತಮ್ಮ ತಪ್ಪಿಸಲಾರಳವುಮಿಗೆ
ಬೊಮ್ಮ ಬರಹವನೆಂದೆ ರಕ್ಷಿಸು ನಮ್ಮನನವರತ ||೨೬||

ಸಗರ ವಂಶೋದ್ಭವ ಶ್ರೀರಾಮನು
ಸುಗುಣ ಲಕ್ಷ್ಮಣ ಸೀತೆ ಸಹಿತವು
ಅಗಹರನ ಕಿರಣಂಗಳೊಳಹಿಗೆ ಅಳವಳಿದು ಕೂಡೆ |
ಮೊಗಕೆ ಮುತ್ತುಕದೆಲೆಯ ಕೈಯಿಂ
ನೆಗಹಿಸುತ ನೆರಳ್ದದಿಗೆ ಬೇಗನೇ
ಮಗುಳೆ ತೆರಳಿದ ರಾಮ ರಕ್ಷಿಸು ನಮ್ಮನನವತ ||೨೭||

ಅಂದು ಜಾನಕಿ ಪೇಳ್ದಳಾ ರಘು
ನಂದನಗೆ ತಾ ನೊಂದುಮಾತನು
ಬಂದುದೀ ಶ್ರಮಯಿಂದು ಯನಗೆ ಮುಕುಂದ ಗೋವಿಂದ |
ಅಂದದಿಂ ಶ್ರೀಗಂಧ ಲೇಪನ
ದಿಂದ ವಿಡೆಯವನೀವ ಫಲತನ
ಗೆಂದಿಗೆನೆ ಮನ್ನಿಸಿದೆ ರಕ್ಷಿಸು ನಮ್ಮನನವರತ ||೨೮||

ಬಂದು ಪಂಚವಟಿ ಪ್ರವೇಶದೊ
ಳಂದು ಲಕ್ಷ್ಮಣ ಸೀತೆ ಸಹಿತಾ
ನಂದದಿಂದಲಿನಿಂದು ಸೌಖ್ಯವಿದೆಂದು ಸಂಭ್ರಮದಿ |
ಕಂದ ಲಕ್ಷ್ಮಣ ಕರುಣ ಹೃದಯಗೆ
ತಂದು ಫಲಪಣ್ಣುಗಳ ಕೊಡುತಿರ
ಲಂದು ದಿನಗಳಿದಿರ್ದೆ ರಕ್ಷಿಸು ನಮ್ಮನನವರತ ||೨೯||

ಆ ಸುಲಕ್ಷ್ಮಣ ಶೂರ್ಪನಖಿಯನು
ನಾಶಿಕಶ್ಚೇದನವ ಮಾಡಲು
ಘಾಸಿಯಾದಳು ಶೂರ್ಪನಖಿ ಖರದೂಷಣಾದ್ಯರಿಗೆ |
ಸೂಸಿ ಕಂಬನಿಗರದು ಪೇಳಲು
ನಾಶಿಕದ ವಾರ್ತೆಯನು ಬಂದರ
ನಾಸಿಯಿಂ ಶಿಕ್ಷಿಸಿದೆ ರಕ್ಷಿಸು ನಮ್ಮನನವರತ ||೩೦||



ಕಾಕಾಸುರನಪರಾಧವನು ಲೋ
ಕೈಕ ವೀರನೆ ನೀ ಕ್ಷಮಿಸಿ
ಬೇಕೆಂಬ ಮೃಗವನುತಹೆನು ಯೆಂದೇಕಾಕಿಯಲಿ ತೆರಳೆ |
ಯಾಕೆ ಲಕ್ಷ್ಮಣ ತೆರಳು ಮೃಗದೆಡೆ
ಯಾಕರಿಸುತಿದೆ ರಾಮ ಶಬ್ದೆಂ
ದಾಕೆಯರಸನೆ ರಾಮ ರಕ್ಷಿಸು ನಮ್ಮನನವರತ ||೩೧||

ಎಂದ ಮಾತಿಗೆ ಲಕ್ಷ್ಮಣನು ತಾ 
ನೊಂದು ಆಲೋಚನೆಯ ವಿರಚಿಸ
ಲಂದು ಸೀತೆಯು ಸಂದೇಹವ ಪಡುತೊಂದು ಮಾತಾಡೆ |
ಕಂದಸಮನೆನುತಿರ್ದೆಯಿದುವರಿ
ಗಿಂದು ಈ ಪರಿ ತಿಳಿಯದ್ ಹೋದೆ ಮು
ಕುಂದನೆಂದಳ ಕಾಂತ ರಕ್ಷಿಸು ನಮ್ಮನನವರತ ||೩೨||

ಈಕೆಯೀಪರಿ ನುಡಿಯಲಾಕ್ಷಣ
ಸಾಕು ಜನ್ಮವೆನುತ್ತ ಲಕ್ಷ್ಮಣ
ಲೋಕ ಸನ್ನುತ ರಾಮ ರಾಮ  ಎನುತ ಕಿವಿಯನುಮುಚ್ಚೆ |
ಓಕರಿಪ ಸೀತೆಯನು ನೋಡಿ ಶ
ರಾಕರುಷನನುಕರಿ ಪೊರಟ ವಿ
ವೇಕಿ ಲಕ್ಷ್ಮಣನಣ್ಣ ರಕ್ಷಿಸು ನಮ್ಮನನವರತ ||೩೩||

ಮಿತಿಯ ನರಿಯದೆ ರಾವಣನು ತಾ
ಯತಿಯ ರೂಪವತಾಳೆ ಆ ಕ್ಷಣ ಪ
ತಿತ ಪಾವನೆ ಯತಿಸ್ವರೂಪಗೆ ಗತಿಯು ಈ ಗೃಹವು |
ಮತಿಯು ಮಂಗಳ ಕರವು ಎನಲಾ
ಸತಿಯು ಬಿಜಯಂಗೈವುದೆಂದಳ
ಪತಿಯೆ ಶ್ರೀರಘುರಾಮ ರಕ್ಷಿಸು ನಮ್ಮನನವರತ ||೩೪||

ಎಲೆ ತರುಣಿ ರಾಮೆಂಬ ಪುರುಷನು
ಸುಲಲಿತದ ಮೃಗನೆವದಿ ಸಂಶಯ
ಸುಲಭವಲ್ಲದ ಮೃಗದ ಬೆಂಬಳಿವಿಡಿದು ಪೋದುದಕೆ |
ವಲಿಸು ಎಮ್ಮನು ನಿನ್ನಭಿಷ್ಟವ
ಸಲಿಸುವೆವು ಎನಲಂದು ಚಿಂತಿಪ
ಲಲನೆಯರಸನೆ ರಾಮ ರಕ್ಷಿಸು ನಮ್ಮನನವರತ ||೩೫||



ಕನ್ನೆ ಕಾಮಿನಿರನ್ನೆನಿಪ
ಚನ್ನಾರಿಭಿಕ್ಷವನೀಯೆ ಗುಣ ಸಂ
ಪನ್ನೆ ನಿನ್ನಯ ಭಕ್ತಿ ಪೂರ್ವಕಕೀಗ ಮೆಚ್ಚಿದೆವು |
ಎನ್ನುತಲಿ ಮುನ್ನಿನ ಶರೀರವ
ರನ್ನ ತೇಜಳಿದಾಗ ತೋರಿದ
ಅನ್ನೆ ಕಾರಿಯ ವೈರಿ ರಕ್ಷಿಸು ನಮ್ಮನನವತ ||೩೬||

ಬಿಸಜ ವೈರಿಯ ಧರಿಸಿದಾತನ
ಬಿಸಜ ಪೆತ್ತೈಯನಿಗೆ ಸಮ ವಾ
ದಸಮ ಶೌರ್ಯದ ವೀರನಹೆ ದಶಕಂಠ ಪೆಸರೆನಗೆ |
ವಸುಧೆಯೊಳು ಕಮಲಜ ಭವಾದ್ಯರು
ಯಸವ ಸುರರಿಂ ಮಿಗಿಲು ಎಂದಾ
ಅಸುರ ವೈರಿಯ ರಾಮ ರಕ್ಷಿಸು ನಮ್ಮನನವರತ ||೩೭||

ಯಾಕೆ ಬೇಡಿದೆ ಪೊಂ ಮೃಗವ ತಾ
ನ್ಯಾಕೆ ಬೇಡೆಂದಡೆಯು ಮೈದುನ
ನ್ಯಾಕೆ ನೂಕಿದೆ ಕಾನನಕೆ ಈ ಪಾಪಜನ್ಮವನು |
ಲೋಕಸನ್ನುತ ರಾಮ ಸಿರಿಲೋ
ಕೈಕ ವೀರನೆ ರಾಮ ಎಂದಾ
ಲೋಕಮಾತೆಯ ಪತಿ ರಕ್ಷಿಸು ನಮ್ಮನನವರತ ||೩೮||

ಇಂತೆನುತ ಶ್ರೀಕಾಂತಯೆನುತಲಿ
ಸಂತಸವನಳಿದಂತರದಿನಿಂ
ದಂತ ಸೀತಾಕಾಂತೆ ಮುಖವನು ನೋಡಿ ದಶಕಂಠ |
ಎಂತು ಮಾತೆಲೆ ತರುಣಿ ನಿನಗಿಂ
ನೆಂತು ಧೈರ್ಯವು ಸಾಕುಬಿಡೆನೆಂ 
ದಂತ ರಾನಣವೈರಿ ರಕ್ಷಿಸು ನಮ್ಮನನವರತ ||೩೯||

ಎಂದು ಕಬರಿಯ ಪಿಡಿದು ರಥದೊಳ
ಗಂದು ಸೀತೆಯನಿರಿಸಿ ಮುಂದಡಿ
ಯಿಂದ ಪಥವಿಡಿದಂದು ತೆರಳಲು ಕಂಡು ಜಾನಕಿಯು |
ಹಿಂದೆ ಕಂದನ ಕಾಯ್ದ ತೆರದಿ ಮು
ಕುಂದ ರಕ್ಷಿಸು ಮಾರಿಕೈಯಲಿ
ನೊಂದೆನೆಂದಳ ಪತಿಯೆ ರಕ್ಷಿಸು ನಮ್ಮನನವರತ ||೪೦||



ಎಳೆದಳಿರು ಫಲಪಣ್ಣುದಳಿರು 
ಗಳ್ನಳಿನಗಳ್ ಅಳಿವಕ್ಕಿ ನವಿಲು
ಗಳ್ ಗಿಳಿಯ ಮರಿಯನು ಗಿಡಗಪಿಡಿವೋಲ್ಸುಲಭವಾಯ್ತೆಂಬ |
ಎಳೆಯ ಗಿಡಮರಗಳಿಗೆ ಪೇಳಲು
ನಳಿನ ಲೋಚನ ಬಂದರೆಲ್ಲವ
ತಿಳಿಪುದೆಂದಳ ಪತಿಯೆ ರಕ್ಷಿಸು ನಮ್ಮನನವರತ ||೪೧||

ಮುಂದೆ ದಾರಿಯಾಳ್ರಾಮ ರಾಮೆಂ
ದೊಂದು ಶಬ್ದವ ಕೇಳಿ ಪಕ್ಷಿಯು
ಇಂದು ಎನ್ನನು ಗೆದ್ದು ರಥವರಿದೊಯ್ದ ಪೋಗೆನಲು |
ಸಂಧಿಸುತ ರಾವಣನು ಮೋಸದೊ
ಳಂದು ಪಕ್ಷಿಯ ಹೊಡದು ಪೊರಡಲು
ಅಂದು ಚಿಂತಿಪಳರಸ ರಕ್ಷಿಸು ನಮ್ಮನನವರತ ||೪೨||

ಸರಸ ಮುಖಿ ತನ್ನಯ ಸುವಸ್ತುಗ
ಳರಸ ಬಂದರೆ ಈವುದೆನುತ
ಲಿ ರವಿಕೆ ತುದಿಯಲಿ ಮುದುರಿ ಸುಗ್ರೀವಾದಿ ಮುಖ್ಯರಿಗೆ |
ಹರಸಿ ಸೀತೆಯು ಬಿಸುಡಲನಿತದಿ
ಮರುಕತದ ವಸ್ತುಗಳ ನೋಡು
ತ್ತಿರುವ ಕಪಿಗಳ ದೇವ ರಕ್ಷಿಸು ನಮ್ಮನನವರತ ||೪೩||

ಸರಸವೆಸೆಯುವಶೋಕವನದಲಿ
ಅರಸಿ ಸೀತೆಯನಿರಿಸೆ ಕಾವಲು
ವಿರಸಿ ಸೀತೆಯ ಹರುಷಗೊಳಿಸುವ ತೆರನ ನಿಶ್ಚೈಸಿ |
ಸರಸಮೆತ್ರಿಜಟೆಯವರ್ಗೆ ಜಾನಕಿ
ವರವ ತನಗೆಯು ವಿರಚಿಸೆಂದಾ
ದುರುಳನ್ವೈರಿಯೆ ರಾಮ ರಕ್ಷಿಸು ನಮ್ಮನನವರತ ||೪೪||

ಇತ್ತಲಾ ಮೃಗನೆಕ್ಕಿ ಕುಕ್ಕಿದ
ಪೊತ್ತು ಬರುತ ಸೌಮಿತ್ರಿ ತನಯನ
ಅರ್ಥಿಯಲಿ ಭರದಿಂದ ಮಿಗೆ ಕಣ್ಣೆತ್ತಿ ತಾ ನೋಡಿ |
ಮತ್ತೆ ಲಕ್ಷ್ಮಣ ಬರುವ ಬಗೆಯೇ
ನೆತ್ತು ಸೀತೆಯ ಬಿಟ್ಟು ಬಂದೆ ಸು
ಮಿತ್ರ ಹೇಳೆಂದಾತ ರಕ್ಷಿಸು ನಮ್ಮನನವರತ ||೪೫||



ಅಂದು ರಾಮನ ಚರಣಕಮಲಕೆ
ವಂದನೆಯ ವಿರಚಿಸುತ ಹೋಗುವು
ದೆಂದು ಜಾನಕಿ ಎಂದ ಮಾತುಗಳಿಂದ ವಿರಚಿಸಲು |
ಚಂದವಾಯಿತೆ ಬಂದುದೆಲವೊ
ಯಿಂದುಮುಖಿ ಏನಾದಳೆಂಬೀ 
ಸಂದೇಹದಿ ನುಡಿದಾತ ರಕ್ಷಿಸು ನಮ್ಮನನವರತ ||೪೬||

ಎನುತ ಅನುಜನ ಕೂಡೆ ಬಂದಾ
ವನಕೆ ಮೃಗವನು ತಂದೆನೆನುತಲಿ
ಮನೆಯ ಬಾಗಿಲೊಳ್ನಿಂದು ಕೂಗಲು ವನಿತೆ ಸಂಶಯವು |
ಘನವದಾಗಿದೆ ಅನುಜ ಏನೈ
ವನಿತೆ ಮನೆಯೊಳಗಿಲ್ಲವೆಂದೆ
ಅನುಜನೊಳು ನುಡಿದಾತ ರಕ್ಷಿಸು ನಮ್ಮನನವರತ ||೪೭||

ಅರ್ತಿ ತಪ್ಪಿತು ಲಕ್ಷ್ಮಣನೆ ಮ 
ತ್ತೆತ್ತ ಕಳುಹಿದೆ ಜಾನಕಿಯ ಪೇ
ಳ್ಕೃತ್ತಿವಾಸನ ಆಣೆಜೀವ ನಿರರ್ಥವಾದಪುದು |
ಚಿತ್ತವಿಸು ಸೌಮಿತ್ರಿ ಸೀತೆಯು
ವ್ಯರ್ಥವಾದಳು ಓರ್ವನಾದೆನೆ
ನುತ್ತ ಚಿಂತಿಸಿದಾತ ರಕ್ಷಿಸು ನಮ್ಮನನವರತ ||೪೮||

ಅಂಗನೆಯನೊಡಗೂಡಿ ಬಾಳ್ವುದು 
ಭಂಗವಾಯ್ತುಸೌಮಿತ್ರಿ ಹಾಯೆಂ
ದಂಗನೆಯ ನೆನನೆನದು ಹಂಬಲಿಸುತ್ತಲಾ |
ಕಂಗಳಲಿ ಉದುರಿಸುತ ಜಲವನು
ಹಿಂಗಿ ತನ್ನನು ಕಳವಳಿಸಿ ತಂ
ನ್ನಂಗನೆಯ ನೆನೆದಾತ ರಕ್ಷಿಸು ನಮ್ಮನನವರತ ||೪೯||

ಆತುರವು ಏತಕ್ಕೆ ಶ್ರೀರಘು
ಜಾತ ತಾಳಿಸು ಜನಕ ಜಾತೆಯು
ಯಾತರಿಂದೀ ರೀತಿಯಾಗಿಹಳೇನು ಕಾರಣವೂ |
ಖಾತಿ ತಳ್ಕಿಸು ಕರುಣವಿಡು ಭೂ
ಜಾತೆಯಲ್ಲಿದ್ದರೆ ಯುತಹೆನೆಂ
ದಾತ ನಗ್ರಜ ರಾಮ ರಕ್ಷಿಸು ನಮ್ಮನನವರತ ||೫೦||



ದಂಡಕಾರಣ್ಯದಲಿ ರಾಮನು
ಹೆಂಡತಿಯ ಹೋಗಾಡಿ ಪುನರಪಿ
ಭಂಡತನದಲಿ ಪೊರೆವ ಜೀವವನೆಂಬ ಮಾತುಗಳ |
ಕಂಡ ಕಂಡವರೆಲ್ಲ ನುಡಿವರು
ಲಂಡತನ ಬಾಳುವೆಯ ಜೀವನ
ದಂಡಿಸುವೆ ಎಂದಾತ ರಕ್ಷಿಸು ನಮ್ಮನನವರತ ||೫೧||

ಅಂದು ಮೂರ್ಛೆಯೊಳ್ಮಲಗಿ ತಕ್ಷಣ
ತಂದೆನಿದೆಕೋ ಹೊಮ್ಮರಿಯನೆಂ
ದ್ಹಂಬಲಿಸಿ ಹಾ ಸೀತೆ ಹಾ ಯೆಂದೆಂಬ ರಾಘವನ|
ಅಂದು ಲಕ್ಷ್ಮಣ ನೋಡಿ ತಳ್ಕಿಸು
ತೆಂದ ನೀನಾರೆಂದು ತಿಳಿಯೆಂ
ತೆಂದ ನಗ್ರಜ ರಾಮ ರಕ್ಷಿಸು ನಮ್ಮನನವರತ ||೫೨||

ತಮ್ಮ ಲಕ್ಷ್ಮಣ ತರುಣಿ ಜಾನಕಿ
ನಿರ್ಮಳದೊಳೆಲ್ಲಿಹಳೊ ಎಂಬೀ
ಜೊಮ್ಮು ಹಮ್ಮುತನೆಮ್ಬುದಿಲ್ಲವುಯೆಂದು ರಘುಪತಿಯು |
ತಮ್ಮನಂ ವಡಗೊಂಡು ತರುಣಿಯ
ಹಂಬಲಿಸುತಡವಿಯೊಳು ಗಿಡಗಳ
ಗಮ್ಮನೆಯು ಕೇಳ್ದಾತ ರಕ್ಷಿಸು ನಮ್ಮನನವರತ ||೫೩||

ಮಂದಗಮನೆ ಯನರಸಿ ಬರುತಿರ
ಲೊಂದು ಪಕ್ಷಿಯ ಕಂಡು ಬೆಸಗೊಳ
ಲಂದು ರಾವಣನಿಂದನೊಂದೆನು ಸತಿಯ ಮೊರೆಯಿಡಲು |
ಬಂದು ಪಥವನು ತಡೆಯಲೆನ್ನನು
ಕೊಂದು ಪೋದನು ಮಾಯೆಯಲಿ ಇನಿ
ತೆಂದವನ ಕಂಡಾತ ರಕ್ಷಿಸು ನಮ್ಮನನವರತ ||೫೪||

ತರುಣಿ ಇರವನು ಕೇಳಿ ಈರ್ವರು
ಕರಕರಗಿ ಮರಮರುಗಿ ಜಾನಕಿ
ಯೆರವೆಯಾದಳೆ ಹಾ ಎನುತ ಹಮೈಸಿ ಚಿಂತಿಸುತ |
ಸರಸಿಜಾಕ್ಷಿಯನೀಗಿದೆವು ವಿಧಿ
ಬರಹ ಮೀರಲು ಆರಳವುಯೆಂ
ದೊರಲಿ ಪೊರಳಿದ ರಾಮ ರಕ್ಷಿಸು ನಮ್ಮನನವರತ ||೫೫||


ಮಂದರಾದ್ರಿ ಸಮಾನ ಪಕ್ಷಿಗೆ
ಚಂದದಿಂದಲಿ ಮೋಕ್ಷವಿತ್ತು ಕ
ಬಂಧನನು ಸಂಹರಿಸಿ ಪಥವಿಡಿದಂಬುಜಾಕ್ಷನನು |
ಅಂದು ಶಬರಿಯು ಕಾಣುತಾಕ್ಷಣ
ಮಂದಣಾಗಮ ತಿಳುಹಿ ತೆರಳಿ ಕಿ
ಷ್ಕಿಂದವನು ಕಂಡಾತ ರಕ್ಷಿಸು ನಮ್ಮ ನನವರತ ||೫೬||

ದೂರದಲಿ ಕಿಷ್ಕಿಂದ ನಗರಿಯ
ಚಾರುಶೀಲರು ನೋಡಿ ಹರ ಹರ
ಯಾರಿಗಾದರು ಸಾಧ್ಯವೇ ಈ ರಾಜ ರಾಜರೊಳು |
ಮಾರಹರ ಬಲ್ಲೆನುತ ಶ್ರೀರಘು
ವೀರ ತಮ್ಮಗೆ ನಾರಿಯನು ನೀ
ತೋರು ಎಂದಾ ರಾಮ ರಕ್ಷಿಸು ನಮ್ಮನನವರತ ||೫೭||

ದೂರದಲಿ ಬರಿತಿರ್ದರೀರ್ವರು
ದಾರಿಯಲಿ ಸುಗ್ರೀವನೀಕ್ಷಿಸಿ
ಬಾರೊ ಆಂಜನೇಯತನಯ ನೋಡಿದರ‍್ಯಾರು ಎಂದೆನಲು |
ಸಾರ ಹೃದಯನು ಸತ್ಯ ಶೀಲನು
ಧೀರ ವಾಯುಕುಮಾರ ಬರುವದ
ನಾರೆ ಈಕ್ಷಿಸಿದಾತ ರಕ್ಷಿಸು ನಮ್ಮನನವರತ ||೫೮||

ಬಂದು ರಾಮನ ಚರಣ ಕಮಲಕೆ
ವಂದನೆಯ ವಿರಚಿಸುತ ನೀವ್ಯಾ
ರೆಂದು ಕೇಳಲು ಯಿಂದಿರಾವರನವಗೆ ಪೇಳಿದನು |
ಬಂದಕಾರ‍್ಯಗಳೆಲ್ಲ ಪೇಳ್ವೆವು
ಕಂದ ನೀ ನೆಲ್ಲಿಂದ ಬಂದೆಯೊ
ಇಂದು ಪೆಸರೇನೆಂದೆ ರಕ್ಷಿಸು ನಮ್ಮನನವರತ ||೫೯||

ಸರಸಿಜಾಕ್ಷನೆ ಚಿತ್ತವಿಸು ಈ
ಪುರದರಸು ಸುಗ್ರೀವ ನಿಮ್ಮಯ
ಬರವ ಮಿಗೆ ಕಾಣುತಲೆ ಯೆನಗನವರತ ಅಪ್ಪಣೆಯ |
ಅರುಹಿಸಿದನದರಿಂದ ಬಂದೆನು
ಅರಿವುದೆನಪೆಸರಾಂಜನೇಯನು
ಕರುಣೆಯನಲ್ಲರುಪಿಸಿದೆ ರಕ್ಷಿಸು ನಮ್ಮನನವರತ ||೬೦||


ವಸುಧೆಯೊಳು ದಶರಥನರಸಿ ಕೌಸಲ್ಯೆ
ಸುತ ರಘುರಾಮನೆಂಬೀ
ಹೆಸರು ತನಗಿದು ಶಶಿಯ ಹೋಲ್ವಿಕೆಗೆಸೆವ ಲಕ್ಷ್ಮಣನು |
ವಸುಮತಿಯಸುತೆ ಸೀತೆಯನು ಕ
ದ್ದಸುರ ಕಳವಿನಲಿ ಪೊಯ್ದೆ ಬಂದೆವು
ವ್ಯಸನದಲಿ ಎಂದಾತ ರಕ್ಷಿಸು ನಮ್ಮನನವರತ ||೬೧||

ಅರಸಿ ಸೀತೆಯನರಸಿ ಬಂದೆವು
ಅರಿತುದಿಲ್ಲವು ಅರಿಯ ಪುರವನು
ಗುರುತ ಪೇಳ್ವದೆ ಪರಮ ಉಪಕರವಿರುವುದೆಂದೆನಲು |
ಸರಸಿಜಾಕ್ಷನ ನೋಡಿ ಹನುಮನು
ನರರು ಇವರಲ್ಲೆನುತ ಬಾಗಲು
ನಿರದೆ ಮನ್ನಿಸಿದಾತ ರಕ್ಷಿಸು ನಮ್ಮನನವರತ ||೬೨||

ಕರುಣವಾರಿಧಿ ಚಿತ್ತವಿಸು ಈ
ಪುರದರಸು ಸುಗ್ರೀವನೆಂಬನ
ಹೊರೆಗೆ ತೆರಳರೆ ನಿಮ್ಮಯ ಜಾನಕಿಯಿರವದೆಲ್ಲವನು |
ವಿರಚಿಸಿವನೆಂದೆನುತ ಅರುಹಲು
ತ್ವರಿತದಿಂ ಸುಗ್ರೀವ ಸಖ್ಯವ
ಬೆರಸಿದಾತನೆ ರಾಮ ರಕ್ಷಿಸು ನಮ್ಮನನವರತ ||೬೩||

ಸಂಭ್ರಮದಿ ನಾ ನಿಮ್ಮ ಚರಣವ
ನಂಬಿದೆನು ಎನಲಾಗ ಹರಿಸುತ
ಅಂಬುಜಾಕ್ಷನು ಕಂಡು ತನ್ನಯ ನಂಬುಗೆಯನರುಹಿ |
ನಂಬು ನೀ ಭಯ ಬ್ಯಾಡ ವಾಲಿಯು
ಎಂಬುವನ ಸಂಹರಿಸೆ ನಿರ್ನಯ
ವೆಂದ ಶ್ರೀರಘುರಾಮ ರಕ್ಷಿಸು ನಮ್ಮನನವರತ ||೬೪||

ತಾಳತರುವನು ಮುರಿದು ಸಮನಸ
ಪಾಲನೂರಿಗೆ ಕಳುಹಿ ವಾಲಿಯ
ಲೀಲೆಯಲಿ ಕಿಷ್ಕಿಂದ ಪಟ್ಟವ ಕಟ್ಟರವಿಜಯಂಗೆ |
ಬಾಲ ಲಕ್ಷ್ಮಣನೈದಿ ಕಪಿಕುಲ
ಪಾಲ ಕನಕರ ತರಲು ಸೀತಾ
ಬಾಲೆ ಕುರುಹನು ಪೇಳ್ದ ರಕ್ಷಿಸು ನಮ್ಮನನವರತ ||೬೫||


ಶರಧಿದಾಂಟುತಲಾಗ ಹನುಮ
ಉರುತರದ ಲಂಕಿಣಿಯ ಶಿಕ್ಷಿಸಿ 
ಹರುಷದಿಂ ಜಾನಕಿಯರಸುತ ಆಂಜನೇಯತನಯಾ |
ತರುಣಿ ಸೀತೆಯ ಕಂಡು ವಂದನೆ
ವಿರಚಿಸುತ ಉಂಗುರವನಿತ್ತಾ
ಹರಿಯಸುತನಿಂಗೊಡೆಯ ರಕ್ಷಿಸು ನಮ್ಮನನವರತ ||೬೬||

ಇರಲಶೋಕಾವನಕೆ ಕಾವಲು
ವೆರಸಿ ಹರಿ ಮರ್ಧಿಸಲು ಮಿಕ್ಕ
ವರರುಹೆ ದಶಶಿರ ತಮ್ಮವರ ಕರತರಸಿ ನೇಮಿಸಿದ |
ಭರದಿ ಸೀತೆಯನರಸ ಬಂದವ
ನಿರದೆ ಶೋಕಾವನವ ಕೆಡಿಸಿದ
ಪರಿಯ ಕೇಳ್ದನರಿಪುವೆ ರಕ್ಷಿಸು ನಮ್ಮನನವರತ ||೬೭||

ಎಂದ ಮಾತಿಗೆ ಮಂದಿ ಕುದುರೆಯು
ಇಂದು ಧರಸುತ ಸಹಿತ ರಘುವರ
ನಿಂದ ಬಂಧನ ತಂದು ಹೆಡಮುಡಿಗಟ್ಟಿ ನಿಂದಿಸಿರಿ |
ಇಂದು ನಿನ್ನಯ ಪೆಸರದೇನೆ
ಲ್ಲಿಂದ ಬಂದೆಯೊ ಕಾರ‍್ಯವಾವುದು
ಎಂದನ್ನೊರೆಯೆ ರಾಮ ರಕ್ಷಿಸು ನಮ್ಮನನವರತ ||೬೮||

ಇಷ್ಟು ಪರಿಯಲಿ ಕೇಳಿ ಇವಗೆಯು
ಕಟ್ಟಿ ಕೂಡಿಸಿ ಕಷ್ಟಪಡಿಸುವ
ದೆಷ್ಟುವಳ್ಳಿತು ಬ್ಯಾಡ ಇದರಿಂದೆಷ್ಟು ಬಂದರೆಯೂ |
ದಿಟ್ಟ ಶ್ರೀರಘುವರ ನಿರುತಿಹ
ನಿಷ್ಟುರವು ಬೇಡಿವನೊಳೆಂದಾ
ನಿಷ್ಟನೊಡೆಯನೆ ರಾಮ ರಕ್ಷಿಸು ನಮ್ಮನನವರಸ ||೬೯||

ಮುಚ್ಚು ಮರೆಯಾಕಿವನನೀಕ್ಷಣ
ಕೊಚ್ಚಿರೋ ತನು ಕರುಳ್ಗಳೆಲ್ಲವ
ಬಿಚ್ಚಿರೊ ಬಲು ಊಚತನುವಿನ ಹೆಚ್ಚು ಮಾತಿನವ |
ಹುಚ್ಚುತನುವನು ಬಿಡಿಸಿ ಬಾಲಕೆ
ಹಚ್ಚಿರಗ್ನಿಯನೆಂದನ್ವೈರಿಯ
ಅಚ್ಚುತನೆ ಶ್ರೀರಾಮ ರಕ್ಷಿಸು ನಮ್ಮನನವರತ ||೭೦||


ಅರಸನಪ್ಪಣೆಯಾಗಲಾಕ್ಷಣ
ಪರಮ ಶೌರ್ಯದ ವೀರರೆಲ್ಲರು
ಬರಸಿಡಿಲ ತೆರನಂತೆ ಆರ್ಭಟಸೆರಗಿ ಕೂಗುತ್ತಾ |
ಅರಿಭಟನ ಬಾಲಕ್ಕೆ ವಸ್ತ್ರವ
ನಿರಿಸಿ ಎಂಣೆಯ ನೆರದು ಅಗ್ನಿಯೋ
ಳ್ಮರಸಿದಾತನ ವೈರಿ ರಕ್ಷಿಸು ನಮ್ಮನನವರತ ||೭೧||

ಕಿರಕಿರನೆ ಕೂಗುತ್ತ ಅರಚುತ
ತರುಣಿಜಗೆವಿನುತತ್ವವೆನಿಸುವ
ಅರಿಯದನನಿಕ್ಷಿಸುತಲಾಂಗೂಲವನು ಬೆಸಗೊಳುತ |
ಪರಿ ಪರಿಯೊಳೆಲ್ಲರನು ಓಡಿಸಿ
ಇರದೆ ದಶಕಂಧರನ ಮುಖ ಕುರಿ
ಕೆರಗಿಸಿದನಿಂಗೊಡೆಯ ರಕ್ಷಿಸು ನಮ್ಮನನವರತ ||೭೨||

ತರುಣಿ ಸೀತೆಯು ಬೆದರ‍್ವಳೆನುತಲಿ
ಯೆರಗಶೋಕಾವನಕೆ ಬೇಗನೇ
ಪರಮ ಪಾತೀವ್ರತೆಯ ಚರಣಕೆ ತನ್ನ ಪರಿಣಾಮ |
ಅರುಹಲಾಕ್ಷಣ ತರುಣಿ ಹನುಮಗೆ
ತರಣಿಜರ ಭರದಿಂದೆಂದಿಗೈ ಕರ
ಕರುವೆಂದಳ ಪತಿಯೆ ರಕ್ಷಿಸು ನಮನನವರತ ||೭೩||

ಮಾಡಬೇಡನು ಮಾನ ಸುಗ್ರೀವಾದಿ ಮುಖ್ಯರು
ಕೂಡಿ ಕರಿಸಿದರಾಡಲ್ಯಾಕದ 
ನೋಡು ತಾಯೇ ನೀಡು ಅಪ್ಪಣೆಯ |
ಗಾಢದಲಿ ಕರತರುವೆನುನುತಲೆ
ಚೂಡರತ್ನವ ತಂದುಕೊಡಲಾ
ನೋಡಿ ಹರುಷಿತನಾದೆ ರಕ್ಷಿಸು ನಮ್ಮನನವರತ ||೭೪||

ತೆರಳಿ ಶರಧಿಯ ಬಳಿಯೊಳಿರುತಿರೆ
ಲರಿಯ ಅನುಜನು ಬಂದು ವಂದನೆ
ವಿರಚಿಸಲು ಲಂಕಾಧಿರಾಜ್ಯದಸ್ಥರವೆದವಿಯಿತ್ತು |
ಶರಧಿ ರಾಜನ ಸ್ಮರಣೆ ವಿರಚಿಸೆ
ಶರಧಿ ಜಡಮತಿಯಿಂದಲಿರೆ ತೊಡೆ
ಶರವ ನಮಿಸಲು ಪೊರದೆ ರಕ್ಷಿಸು ನಮ್ಮನನವರತ ||೭೫||


ಶರಧಿಸೇತುವೆನಳನ ಕೈಯಿಂದುರು
ತರದಿ ಬಂಧಿಸುತಲಾಕ್ಷಣ
ಹರಿಯ ಸುತನನು ಕರದು ಅರಿ ಇಹಪುರಕೆ ಮುತ್ತಿಗೆ |
ಇರದೆ ಸಂಧಿಯ ಬೆಳೆಸಬೇಕಿದು
ಥರವು ರಾಜರ ನೀತಿಯೆಂದಾ
ಪರಮಪುರುಷನೆ ರಾಮ ರಕ್ಷಿಸು ನಮ್ಮನನವರತ ||೭೬||

ಇಂದ್ರಸುತ ನಂದನನ ಕರೆಯಲು
ವಂದನೆಯ ವಿರಚಿಸುತ ಶ್ರೀರಘು
ನಂದನನ ಸಂನಿಧಿಯಲ್ನಿಲ್ಲುತ ಬಂದೆನೆಂದೆನಲು |
ವಂದು ಸಂಧಿಯ ಪೇಳು ಕೇಳಿರಿ
ನಂದನರ ಸಹನೆ ಮನಕಾಣಿಪ
ನೆಂದು ಪೇಳಿದ ರಾಮ ರಕ್ಷಿಸು ನಮ್ಮನನವರತ ||೭೭||


ಹರುಷದಲಿ ಹರಿರಾಮಗತಿಯಂ
ದೆರಗಿ ಲಂಕಾಪುರಕೆ ಬರುತಿರೆ 
ಹರ ಹರೆನುತಲೆ ಪುರದೊಳಿರುವರು ಸರಿಯೆ ಕದನಗಳ |
ಸರಕು ಮಾಡದೆ ಅರಿಯು ರಾವಣ
ನಿರುವ ಬಳಿ ಕಪಿ ಬರಲು ಬಂತೆ
ಮರಳಿ ಎಂದನ ವೈರಿ ರಕ್ಷಿಸು ನಮ್ಮನನವರತ ||೭೮||

ಅರಸು ದಶಶಿರನಿರುವ ಪರಿಯನು
ವರ ಪ್ರಹಸ್ತನೆ ತೋರು ತನಗೆಂ
ನೆರೆಯನಪ್ಪಣೆ ಅರಿವುದಾದರೆ ಉಸುರಿ ಪೋಗುವೆನು |
ತ್ವರಿಯವೆನಗೆಯು  ತೆರಳಿ ಪೋಗುವ
ಪರಿಯ ಬೇಗದಿ ವಿರಚಿಸುವುದೆಂ
ದೊರದ ನೆರೆಯನೆ ರಾಮ ರಕ್ಷಿಸು ನಮ್ಮನನವರತ ||೭೯||

ಹೆಮ್ಮೆಯಿಂದಲಿ ನಿಮ್ಮ ತಂದೆಯ
ಹಮ್ಮು ಮುರಿದಿಹ ಮರ್ಮವರಿಯುತ
ನೆಮ್ಮಿನೀನಿಹುದುಹಿತವೇ ಕೇಳೆಂಮ ನಂಬುವುದು |
ನಿಮ್ಮರಸನಿಂದಧಿಕ ಸತ್ವದೊ
ಳೆಮ್ಮರಸನಂಬೆಮ್ಮನೆನೆ ಮುಳಿ
ದೊಮ್ಮನಂಗದನೆರೆಯರ ರಕ್ಷಿಸು ನಮ್ಮನನವರತ ||೮೦||


ನಮ್ಮ ಪಿತನೋಪಾದಿ ಈಗಲೂ
ನಿಮ್ಮರಸಗೊದಗಿಹುದು ತಪ್ಪದು
ನೆಮ್ಮದಿಯೊಳಿರುವಂತ ಪ್ರಾಪ್ತಿಯ ಫಲವು ತನಗಿಲ್ಲ |
ತಮ್ಮನಸು ದಶಶಿರನದೆಂಬುವ
ಕರ್ಮ ಖೂಳನ ಪರಿಯ ತೋರಿಂ
ದೊಮ್ಮೆಯಂದನ ಯೆರೆಯರ ರಕ್ಷಿಸು ನಮ್ಮನನವರತ ||೮೧||

ಪುಂಡುಮಾತ್ಯಾಕೆಲವೊ ತ್ರೈಜಗ
ದಂಡರಾಜರ ಪುಂಡ ದಶಶಿರ
ಗಂಡ ಬಿರುದಿನ ಪೆಸರ ಭಟನನು ಕಂಡ್ಯ ನೀನೆನಲು |
ಮಂಡೆಯನು ತೂಗ್ಯಾಡುತಹುದು ಪ್ರ
ಚಂಡ ಬರುತಿಹ ನಿನ್ನ ಮರ್ಧಿಪ
ಗಂಡನೆಂದನ ಯೆರೆಯ ರಕ್ಷಿಸು ನಮ್ಮನನವರತ ||೮೨||

ನಳಿನಲೋಚನ ರಾಮಚಂದ್ರಗೆ
ತಳುವದಲೆ ನಾನೇನ ಪೇಳ್ವುದು
ಒಳಗೆ ಸಂಧಿಗೆ ಹೊರಗೊ ಪೇಳೆಲವೆಲವೊ ಯೆಂದೆನಲು |
ಭಳಿರೆ ಹುಲು ರಾಮನೊಲು ಸಂಧಿಯ
ಬೆಳಸು ಎನೆ ಉಳಿವಿಲ್ಲ ನಿನಗಿಂ 
ನಳಿವೆಯೆಂದನ ವೈರಿ ರಕ್ಷಿಸು ನಮ್ಮನನವರತ ||೮೩||

ಮಂದಮತಿ ನಿನ್ನನುಜ ರಾಮನ 
ಹೊಂದಿಯಿಹ ನೀನೀಗಲಾದರು
ಬಂದಯೆನ್ನಯ ಹಿಂದೆನಿಂದಾ ಅಂಬುಜಾಕ್ಷನಿಗೆ |
ವಂದನೆಯ ವಿರಚಿತ ಚರಣವ
ಹೊಂದೆನಲು ಕಡು ರೋಷ ತಾಳ್ದಾ
ಮಂದ ಭಾಗ್ಯನರಿಪುದೆ ರಕ್ಷಿಸು ನಮ್ಮನನವರತ ||೮೪||

ಯಾಕೆಲವೊ ಬಹು ಕೋಪ ರಾವಣ
ಸಾಕು ನಿಲ್ಲಿಸು ಶೌರ‍್ಯ ತಾಳಿಸು
ಆ ಕಮಲನೇತ್ರನಿಗೆ ನೀ ಸರುಸಾಟಿಯೇನಲವೊ |
ಪಾಕಶಾಸನ ಪದ್ಮಜಾದಿನಿ
ನಾಕಿಧರ ಧ್ಯಾನಿಪರು ಎಂದಾ
ಲೋಕವೀರನ ಒಡೆಯ ರಕ್ಷಿಸು ನಮ್ಮನನವರತ ||೮೫||


ಬಗೆಯ ದಿವಗೆ ಮಗೊಲೆಯನಿಕ್ಕೆನೆ
ತೆಗೆದು ಕರವಾಳಗಳ ಝಳಪಿಸೆ
ಧಗ ಧಗೆನುತಲೆ ರೋಷವೇಷವ ತಾಳ್ದು ಪಟುಭಟರು |
ತೆಗೆದುಕೋ ಮರಮುಗಲದಿಂದುರ
ಬಗಿಯನುತ ತಿವಿಯಲ್ಕೆ ರೋಷದಿ
ನೆಗೆದು ಹೊಯಿದನವಡೆಯ ರಕ್ಷಿಸು ನಮ್ಮನನವರತ ||೮೬||

ಲಟಕಟಿಸಿ ಬಾಲದಲಿ ಅಂಗದ
ಚಟುಲತರ ಭಟರುಗಳ ಮರ್ಧಿಸಿ
ನಿಟಿಲ ಧರಸಖನಿರುವ ತಾವಿಗೆ ಬಿಸುಟನವರುಗಳ |
ಸುಟುತರದ ಸಾಹಸಿಯು ರೋಷದಿ
ಭಟರಸೀಳ್ಗಳ ಬಿಸುಡಲಾಗ
ಕ್ಕಟಿಯನುತ ಚಿಂತಿಸಿದೆ ರಕ್ಷಿಸು ನಮ್ಮನನವರತ ||೮೭||

ಲಂಕಪುರದದಧಿಪತಿಯ ಯಿರವನು
ಪಂಕಜಾಕ್ಷನು ಕೇಳಿ ಹರ ಹರ
ಬಿಂಕತನವನು ಬಿಡನು ಲಂಕೆಗೆ ಪೊಕ್ಕು ರಕ್ಕಸನ |
ಕೊಂಕುತನವನು ಬಿಡಿಸಿ ಯಮಪುರ
ಲಂಕೆಯೊಳು ಇರಿಸುವೆನು ಎಂದನಿ
ಶ್ಯಂಕ ಶ್ರೀರಘುರಾಮ ರಕ್ಷಿಸು ನಮ್ಮನನವರತ ||೮೮||

ಎಂದು ರಘುವರ ನುಡಿಯಲಾಕ್ಷಣ
ದರಿಧಣರ್ಧಣರೆನುತಜಯರವದಿಂದ
ಬಂದಾ ಲಂಕೆಲಗ್ಗೆಯೊಳ್ನಿಂದು ಕಪಿದಳವು |
ಸಂದಣಿಸುತುರವಣಿಸಿ ರಕ್ಕಸ
ವೃಂದವನು ಕೊಂದಾರ್ಭಟಿಸೆ ಹರ
ನಂದನನೊಳೆಂದಾತ ರಕ್ಷಿಸು ನಮ್ಮನನವರತ ||೮೯||

ಆರತಿರೆ ಹರಿಜನೆ ಅರಿಯವರು ಮು
ತ್ತಿರುವ ಬಂಧುರಧಿರವ ನೋಡಿ
ದ್ಯಧರವ ಹರಿವ ಜಲಂಗಳೀಪರಿ ಹರ ಮಹಾದೇವ |
ನರ ವಿಭೀಷಣನಿಂದ ಈ ಪುರ
ದಿರವು ತಿಳಿಯಲಿ ಬೇಕು ಎಂದಾ
ಪರಿಯ ಕೇಳಿದ ರಾಮ ರಕ್ಷಿಸು ನಮ್ಮನನವರತ ||೯೦||


ಕರಸಿದನು ಹರಿಸುತನು ಹನುಮನ
ಉರುತರದ ಅಂಗದನಗಮಯನ
ಪರಮಸಾಹಸ ನಳನನೀಲನವರಸು ಜಾಂಬವನ |
ಕರದು ಮರಿಯಾದೆಗಳ ವಿರಚಿಸಿ
ಅರಿಕಟಕ ಸವರೆಂದು ಪೇಳಿದ
ನೆರೆಯ ಶ್ರೀರಘುರಾಮ ರಕ್ಷಿಸು ನಮ್ಮನನವರತ ||೯೧||

ಉರುತರದ ಕಪಿವೀರರೆಲ್ಲರು
ಕರದಿ ಹೆಮ್ಮರ ಪಿಡಿದು ಭಳಿರೆನು
ತುರವಣಿಸಿ ರಕ್ಕಸರ ಶಿರಗಳನಿರದೆ ತಲೆಗಡಿಯೆ |
ವರನರಾಂತಕರಗ್ನಿವರ್ನರು
ಸರಿಯೆ ಯಮಪುರಕೆನಲು ಚಿಂತಿಪ
ದುರುಳನ್ವೈರಿಯೆ ರಾಮ ರಕ್ಷಿಸು ನಮ್ಮನನವರತ ||೯೨||

ಹರನವೀರ್ಯನ ಹರಿಯ ಅನುಜನು
ಪರಿದು ಬಿಸುಟನು ಧುರದ ಮುಖದಲಿ
ಪೊರೆವರಿಲ್ಲೆಂದೆನುತಾರಾಗಳೆ ಬೆದರೆ ಪುರಜನರು |
ಪರಮಶೌರ್ಯದ ಕುಂಭಕರ್ಣನು
ತೆರಳೆ ಯಮಪುರಕೆನಲು ದು:ಖಿಪೆ
ನರಿಯೆ ಶ್ರೀರಘುರಾಮ ರಕ್ಷಿಸು ನಮ್ಮನನವರತ ||೯೩||

ಪುರದೊಳಗೆ ಡಂಗುರವದಾಗಲಿ
ನರನದೆಂಬನ ಧುರಧಿ ಯಮಪುರಿ
ಗೆರಗಿಸಿದಡಲ್ಲದೆಯು ಇವನಮಗೆರಗುವವನಲ್ಲ |
ಧರೆಯವನಮಗಾಟ ಸೇವೆಯು
ತೆರಳುವುದು ಯನಲಾಗ ಅಪ್ಪಣೆ
ಧರಿಸಿ ಹೊರಟರರರಿಯೆ ರಕ್ಷಿಸು ನಮ್ಮನನವರತ ||೯೪||


ಹೊಡೆವತಮ್ಮಟ ಭೇರಿ ಜಯರವ
ಝಡಿಯೆ ಬತ್ತೀಸಾಯುಧಂಗಳ
ಪಿಡಿದು ಬರುತಿರೆ ಭಟರುಗಳು ಪೊಗಳಿಕೆಯ ಘೋಷದಲಿ |
ಕಡಿದು ಬಿಸುಡುವೆವೆನುತಲಾಗ
ಕ್ಕಡದ ಶೌರ್ಯವನುಡಿದು ಬರೆ ಧನು
ವಿಡಿದು ನಿಂದಾ ರಾಮ ರಕ್ಷಿಸು ನಮ್ಮನನವರತ ||೯೫||


ಚಂದರಾವಣ ಬಂದು ರಣದೊಳು
ಭಂಡು ಮನುಜನೇ ಕೇಳು ನಿನ್ನಯ
ಪುಂಡುಗಾರಿಕೆ ಬಿಡಿಸಿ ಈಕ್ಷಣ ದಂಡಿಸುವೆನೆನಲು |
ಚಂಡಕರ ಕುಲಜಾತನಾ ಕೋ 
ದಂಡಯುತನಿಂದುರ್ರಣದಲಿ
ಭಂಡನೆನುತಲಿ ಜರದೆ ರಕ್ಷಿಸು ನಮ್ಮನನವರತ ||೯೬||

ಎಲವೆಲವೊ ದಶಕಂಠ ನಿನ್ನಯ
ತಲೆಯನರಿದೆಮಪುರಿಕೆ ಕಳುಹಿಸಿ
ಜಲಜನೇತ್ರೆಯ ಕೊಂಡುಪೋಪೆನು ನಿಲ್ಲು ರಣಕೆನುತ |
ತಳುವದಲಿ ಶರವೆಸೆಯಲರಿತಾ
ಬಲುಹಿನಿಂದಿರೆ ಕಂಡು ಚಿಂತಿಪಸು
ಲಲಿತಾಂಗನೆ ರಾಮ ರಕ್ಷಿಸು ನಮ್ಮನನವರತ ||೯೭||

ಪರಮಶೌರ‍್ಯದ ರಾವಣನು
ಹರಿಯೊಡನೆ ಸೆಣಸುತ್ತಿರಲು ರಘು
ವರ ಅರಿಯನುಜನನ ಕೇಳೆ ಸಾಯದ ತೆರವದೇನೆನಲು |
ಹರಿಯೆ ಲಾಲಿಸು ಅರಿಯ ವಕ್ಷದೊ
ಳಿರುವದೆಮ್ಮವವಗೆ ಎನಲು
ಶರವಚ್ಚಾರಾಮ ರಕ್ಷಿಸು ನಮ್ಮನನವರತ ||೯೮||

ಚುಚಿ ಹೃದಯವ ಕೊಚ್ಚಿ ಶಿರಗಳಿ
ಗಚ್ಚಿ ಬಿಸುಡಲು ನಿಚ್ಚಳಾಯಿತು
ಮೆಚ್ಚಿ ಪೂಮಳೆಗರೆಯೆ ಸುರರುಗಚ್ಚುತನ ಮೇಲೆ |
ಸಚ್ಚರಾಚರಕಾದಿ ಮಹಿಮನ
ಮುಚ್ಚಟಿಯನೀಕ್ಷಿಸಲು ರಾಕ್ಷಸ
ಗ್ಹೆಚ್ಚು ಪದವಿಯನಿತ್ತೆ ರಕ್ಷಿಸು ನಮ್ಮನನವರತ ||೯೯||

ಅಂದು ಕರ್ಮ ತ್ರಯಗಳೆಲ್ಲವ
ಚಂದದಿಂ ತೀರಿಸುತಾಗಲೆ
ವಂದನೆಯ ವಿರಚಿಸುತ ಶ್ರೀರಘುನಂದನನೆ ಬೇಗ |
ಅಂದು ಸಂಭ್ರಮದಿಂ ವಿಭೀಷಣ
ನಿಂದು ಭೂ ನಂದನೆಯ ಕರತಹೆ
ನೆಂದೆನಲು ಪೇಳ್ದಾತ ರಕ್ಷಿಸು ನಮ್ಮನನವತ ||೧೦೦||


ಸಾರಸಾಕ್ಷಿಯ ಬೇಗ ಕರತಂ
ದ್ದರುಷದಲಿ ವಪ್ಪಿಸುವುದೆನುತಲಿ
ಮರುಗಿ ಮತ್ತೊಂದೆಣಿಸಿ ಆಗಲೆ ತರುಣಿಯನು ಬೇಗ |
ಪರಿಕಿಸುತ ಅಗ್ನಿ ಪ್ರವೇಶದೊ
ಳ್ತರುಣಿಯನು ಕರದಾಗ ಸತ್ಯದ
ಶರಧಿಯೆನಿಸಿದ ರಾಮ ರಕ್ಷಿಸು ನಮ್ಮನನವರತ ||೧೦೧||

ಅಂದ ಸೀತೆಯು ಸಹಿತ ರಘುಕುಲ
ನಂದನರು ಸಂಭ್ರಮದಿ ಲಂಕೆಯು
ಚಂದದಿಂದಲಿ ಶರಣನಿಗೆ ಸ್ಥಿರವೆಂದು ಅಲ್ಲಿಂದ |
ಇಂದುಮುಖಿ ಲಕ್ಷ್ಮಣನು ಕಪಿಕುಲ
ವೃಂದಸೇನೆ ವಿಭೀಷಣನು ಸಹಿ 
ತಂದದಿಂದಲಿ ಪೊರಟ ರಕ್ಷಿಸು ನಮ್ಮನನವರತ ||೧೦೨||

ಅಂದದಿಂ ರಘುರಾಮ ಸೇನಾ
ವೃಂದ ಸಹಿತಲಿನಿಂದ ನಂದಿಯೊ
ಳ್ಸಂಭ್ರಮದಿ ಭರತನನು ವಡಗೊಂಡಂದು  ಹರುಷದಲಿ |
ಇಂದಿರಾರಮಣಾಂತರಂಗನು
ಚಂದದಿಂ ಶತ್ರುಘ್ನರೊಡನಾ
ನಂದದಿಂ ಬಂದಾತ ರಕ್ಷಿಸು ನಮ್ಮನನವರತ ||೧೦೩||

ಹರನು ಇಂದ್ರನು ಅಜನು ಹರುಷದಿ
ಹರಿಯ ಸನ್ನಿಧಿಗೈಯಲಾಕ್ಷಣ
ಉರುತರದ ಸನ್ಮಾನ ಮಾನವವಿರಚಿಸಿದರಾಗ |
ತರಣಿಜಗೆ ಪಟ್ಟಾಭಿಷೇಕವ
ಸುರರು ದಿಕ್ಪಾಲಕರು ವಿರಚಿಸೆ
ಹರುಷದಿಂದಿರ್ದಾತ ರಕ್ಷಿಸು ನಮ್ಮನನವರತ ||೧೦೪||

ಹೊಡೆವ ತಮ್ಮಟ ಭೇರಿ ರವದಿಂ
ಪಿಡಿದ ಕಹಳಾ ಶಂಖ ನಾದದಿ
ಮಡದಿ ಅರುಂಧತಿಯು ತ್ರೈಜ
ದೊಡೆಯ ರಾಮಗೆ ಬೆಳಗೆ ಆರತಿ
ಸಡಗರದೊಳಿರ್ದಾತ ರಕ್ಷಿಸು ನಮ್ಮನನವರತ ||೧೦೫||

ಹರನಜಗೆ ದಿಕ್ಪಾಲರಿಂಗೆಯು
ಪರಮಶರಣರೆ ಹರಿಯು ತನುಜಗೆ
ಉರುತರದ ರತ್ನಂಗಳಿಂದಲಿ ಉಡುಗೊರೆಗಳಿತ್ತು |
ಕರದು ಕಪಿಕುಲವರ್ಗವನು ಬಹು
ತರದಿ ಮನ್ನಿಸಿ ಹರುಷಗೊಳಿಸಿದ
ಪರಮಪುರುಷನೆ ರಾಮ ರಕ್ಷಿಸು ನಮ್ಮನನವರತ ||೧೦೬||

ಅಂದು ಅಜಹರ ಇಂದ್ರರೆಲ್ಲರು 
ಚಂದದಿಂ ಕವಿವರರು ಶರಣಾ
ನಂದದಿಂದಲೆ ಬಂದು ಹರಿಯಪ್ಪಣೆಯವಿಡಿದಂದು |
ಅಂದದಿಂ ತಮತಮ್ಮನಗರಿಯೊ
ಳ್ನಿಂದು ನಿಮ್ಮಯ ಧ್ಯಾನಪೂರ್ವಕ
ದಿಂದಲಿರುವರು ತಂದೆ ರಕ್ಷಿಸು ನಮ್ಮನನವರತ |೧೦೭||

ಭೋಗಭಾಗ್ಯಗಳನ್ನು ಯಿತ್ತು ಸ
ರಾಗದಲಿ ರಕ್ಷಿಸುವ ತವಪದ
ಮಾಗಮವ ನೆನನೆನದು ಪೊಗಳುವರೇನು ಧನ್ಯರಲ |
ಪೋಗಿ ಕಳವುದು ದಿವಸ ನಿಮ್ಮನು
ಬೇಗ ಸ್ಮರಿಸಿದೆ ಜಗದಿ ಕೆಟ್ಟೆನು
ನಾಗಶಯನ ಮುಕುಂದ ರಕ್ಷಿಸು ನಮ್ಮನನವರತ ||೧೦೮||

ಮಂಗಳಂ ರಾಜಾಧಿರಾಜಗೆ
ಮಂಗಳಂ ಶಿಖಿಪುರಿಯಧೀಶಗೆ
ಮಂಗಳಂ ಸೀತಾಸಮೇತಗೆ ಮಂಗಳಾತ್ಮಕಗೆ |
ಮಂಗಳಂ ಶ್ರೀರಾಮಚಂದ್ರಗೆ
ಮಂಗಳಂ ಕರುಪುರಿಯಧೀಶಗೆ
ಮಂಗಳಂ ರಘುರಾಮಚಂದ್ರಗೆ ಮಂಗಳವು ಸರ್ವರಿಗೆ ||೧೦೯||
**********************************************
ಇದುತನಕ ಇದನೋದಿದ ಸರ್ವರಿಗೂ ಸೀತಾಲಕ್ಷ್ಮಣಾಂಜನೇಯಸಹಿತ
ಶ್ರೀ ರಾಮನು ಸದಾ ಮಂಗಲವನ್ನುಂಟುಮಾಡಲಿ ಎಂಬ 
ಪ್ರಾರ್ಥನೆಯೊಂದಿಗೆ ಯಥಾವತ್ತಾಗಿ ಸಾದರಪಡಿಸಿದ್ದೇನೆ.
                ||ಜೈ ಶ್ರೀರಾಮ್ ||

****************************************************
ಸಂಗ್ರಹ:- ಯಲ್.ಬಿ.ಪೆರ್ನಾಜೆ; ಶ್ರೀಗಿರಿ ನಿಲಯ-ಮದ್ಲ; ಅಂಚೆ:-ಕಾವು-574223; ಪುತ್ತೂರು ತಾಲೂಕು; ದ.ಕ. ಕರ್ನಾಟಕ.             09-09- 2013   ಗಣೇಶ ಚತುರ್ಥಿ.
******************************************************************************






Tuesday 2 April 2013


                                                  ನಿಮಗರಿವಿದೆಯೇ ಈ ವಿಚಾರ ?
                                 ***********************                                                                                                                     
                                                                    ಪ್ರಸ್ತಾವನೆ

      ಮಿತ್ರರೆಲ್ಲರಿಗೂ ವಂದಿಸಿ ಇಂದು ಒಬ್ಬ ಜ್ಯೋತಿಷಿ ಹೇಗಿರಬೇಕು; ಹೇಗಿದ್ದರೆ ಚೆನ್ನ ಎಂದು ಬರೆಯಲಿಚ್ಚಿಸುವೆ.ಜ್ಯೊತಿಷ್ಯ ಎನ್ನುವುದು ಒಂದು ಬೆಳಕಿನ ಶಾಸ್ತ್ರ.ಅದು ಮಾನವನ ಬಾಳಿಗೆ ಒಂದು ಮಾರ್ಗದರ್ಶನ.ಆದರೆ ಅದುವೇ ಮಾರ್ಗವಲ್ಲ.ಜ್ಯೋತಿಷ್ಯಶಾಸ್ತ್ರದ ಆಧಾರದಲ್ಲಿ ಫಲವನ್ನು ತಿಳಿಸಿಕೊಡುವವ ಜ್ಯೋತಿಷಿ. ಸಮಸ್ಯೆಗಳ ಸುಳಿಯಲ್ಲಿ ಸಿಲುಕಿ ದಾರಿ ಕಾಣದ ಹಾಗೆ ಯಾರಿಗೆ ಆಗಿದೆಯೋ ಅವರು ಜ್ಯೋತಿಷಿಗಳನ್ನು ಕಾಣಲು ಬರುತ್ತಾರೆ.ಜ್ಯೋತಿಷ್ಯ ಶಾಸ್ತ್ರಾಧಾರಿತ ಫಲ ಅಥವಾ ಶಾಸ್ತ್ರಾಧಾರಿತ ಮಾರ್ಗದರ್ಶನಕ್ಕಾಗಿ ಬರುತ್ತಾರೆ.ಆಗ ಜ್ಯೋತಿಷಿಯು ಅವರ ಸಮಸ್ಯೆಗಳನ್ನು  ತಾಳ್ಮೆಯಿಂದ ಕೇಳಿ ಸರಿಯಾಗಿ ವಿಮರ್ಶಿಸಿ ಅವರ ಸಮಸ್ಯೆಗಳನ್ನು ಶಾಸ್ತ್ರಾಧಾರಿತವಾಗಿ ಪರಿಹರಿಸುವ ಕೆಲಸವನ್ನು ನಿರ್ವಂಚನೆಯಿಂದ ಮಾಡಬೇಕು.ಸಮಸ್ಯೆಗಳಿಗೆ ಸುಲಭ ಪರಿಹಾರವನ್ನು ಸೂಚಿಸ ಬೇಕಾಗಿರುವುದು ಒಬ್ಬ ಪ್ರಾಮಾಣಿಕ ಜ್ಯೋತಿಷಿಯ ಕರ್ತವ್ಯವಾಗಿರುತ್ತದೆ.ಇಲ್ಲದಿರುವ ದೋಷಗಳನ್ನು ಹೇಳಿ ಬಂದವರನ್ನು ಹೆದರಿಸಿ ಹಣ ಸುಲಿಗೆ ಮಾಡುವುದು ಮಹಾ ಪಾಪ.ಜ್ಯೋತಿಷಿಗೆ ಧನದಾಹಕ್ಕಿಂತ ಮುಖ್ಯ ಶಾಸ್ತ್ರದ ಘನತೆ ಕಾಪಾಡಿಕೊಂಡು ಬರಬೇಕಾದ ಹೊಣೆಗಾರಿಕೆ ಇರಬೇಕು. ಇಲ್ಲದ ಫಲಗಳನ್ನು ಇದೆ ಎಂದು ಹೇಳಿ ;  ಅಥವಾ ಸರಿಯಾಗಿ ವಿಮರ್ಶೆ ಮಾಡದೆ ಫಲ ಹೇಳಿ ಅದಕ್ಕೆ ಪರಿಹಾರದ ರೂಪದಲ್ಲಿ ದೊಡ್ಡ ದೊಡ್ಡ ಪರಿಹಾರಗಳ ಪಟ್ಟಿ ಕೊಟ್ಟು ಆ ಜ್ಯೋತಿಷಿಯ  ಪೈಕಿಯ ಯಾರಾದರೂ ಒಬ್ಬ ವ್ಯಕ್ತಿಯಲ್ಲಿ ಪರಿಹಾರ ಕಾರ್ಯ ಮಾಡಿಸಲು ಸೂಚನೆ ಕೊಟ್ಟು; ಪರಿಹಾರ ಮಾಡಿದ ತಂತ್ರಜ್ಞರ ಕೈಯಿಂದಲೂ ತಾನು ಅವರಲ್ಲಿಗೆ ಪರಿಹಾರ ಮಾಡಿಸಲು ವ್ಯಕ್ತಿಯನ್ನು ಕಳುಹಿಸಿದ್ದಕ್ಕೆ ಹಣ ತೆಗೆದುಕೊಳ್ಳುವುದು ಸರಿಯಲ್ಲ. ಒಂದು ವೇಳೆ ಪರಿಹಾರ ಕಾರ್ಯದ ಅಗತ್ಯವಿದ್ದಲ್ಲಿ ಪರಿಹಾರವನ್ನು ಆ ವ್ಯಕ್ತಿಯ ಗ್ರಾಮ ದೇವಸ್ಥಾನದ ತಂತ್ರಿಗಳ ಕೈಯಲ್ಲಿ ಅಥವಾ ಆ ವ್ಯಕ್ತಿಯ ಕುಲ ಪುರೋಹಿತರ ಮುಖಾಂತರ ಪರಿಹಾರ ಮಾಡಿಸಲು ಹೇಳುವುದು ಸೂಕ್ತ. ಕೆಲವೊಂದು ದೋಷಗಳನ್ನು ಹೇಳಬೇಕಾದರೆ ಸಾಕಷ್ಟು ವಿಮರ್ಶಿಸಿ ದೋಷಗಳು ಖಚಿತವಾಗಿ ಇವೆ ಎಂಬುದನ್ನು ಶಾಸ್ತ್ರಾಧಾರಿತವಾಗಿ  ನಿಶ್ಚಯಮಾಡಿ ನಂತರವೇ ದೋಷಗಳ ಪಟ್ಟಿ ಕೊಡಬೇಕು.ಇಲ್ಲದೆ ಇದ್ದರೆ ಜ್ಯೋತಿಷ್ಯ ಶಾಸ್ತ್ರದ ಅಸ್ಥಿತ್ವಕ್ಕೆ ಹಾನಿಯಾದೀತು.ಅದೊಂದು ಮೂಢನಂಬಿಕೆಯ, ಹೆಡ್ಡರಿಂದ ಹಣ ಕೀಳುವ ಶಾಸ್ತ್ರ ಎನ್ನುವ ಅಪಕೀರ್ತಿಗೆ ಭಾಜನವಾಗಬಹುದು. ಹಾಗಾಗಿ ಯಾವ ಜ್ಯೋತಿಷಿಗೆ ಹಣಕ್ಕಿಂತಲೂ ಶಾಸ್ತ್ರದ ಘನತೆ ಮುಖ್ಯವಾಗಿರುತ್ತದೆಯೋ; ಮತ್ತು ಯಾವಾತನಿಗೆ ಸಾಮಾಜಿಕ ಬದ್ದತೆಯಿರುತ್ತದೆಯೋ ಅಂತಹಾ ಜ್ಯೋತಿಷಿಗಳನ್ನು ಭೇಟಿ ಮಾಡಿ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವುದು ಒಳ್ಳೆಯದು. ಎಲ್ಲರಿಗೂ ಶ್ರೀ ಗುರು ಗಣಪತಿ ಕುಲದೇವರು ಸುಖ ಸಂಪದವನ್ನು ಕರುಣಿಸಲಿ ಎಂಬುದು ಈ ಬರಹಗಾರನ ಹೃದಯಾಂತರಾಳದ ಹಾರೈಕೆಗಳು.
   ಇಲ್ಲಿ ಒಂದು ವಿಚಾರವನ್ನು ಗಮನದಲ್ಲಿರಿಸಿಕೊಳ್ಳುವ ಅಗತ್ಯವಿದೆ.ಜ್ಯೋತಿಷ್ಯವೇ ಸರ್ವಸ್ವವಲ್ಲ. ಆ ಶಾಸ್ತ್ರದ ಆಧಾರದಲ್ಲಿ ತಿಳಕೊಳ್ಳಬಹುದಾದ ಶುಭ ಫಲಗಳಿಂದ ಹಿಗ್ಗಿ ಅಥವಾ ದುಷ್ಠ ಫಲ ಯಾ ದೋಷಗಳಿಂದ ಕುಗ್ಗಿ ತಮ್ಮ ನೆಮ್ಮದಿಯನ್ನು ಯಾರೂ ಕೆಡಿಸಿಕೊಳ್ಳಬಾರದು.ಶಾಸ್ತ್ರದಲ್ಲಿ ಹೇಳುವ ನವಗ್ರಹಗಳು ಕೂಡಾ ತಮಗಿಂತಲೂ ಅಧಿಕ ಶಕ್ತಿಯೊಂದರ ಅಧೀನವಾಗಿ ,ಆ ಶಕ್ತಿಗೆ ತಲೆಬಾಗಿ ಶುಭಾಶುಭ ಫಲಗಳನ್ನು ಕೊಡುತ್ತವೆ ಎಂಬುದು ಗಮನಾರ್ಹ.ಆದ ಕಾರಣ ಆ ಮಹಾ ಶಕ್ತಿಯ ಮೊರೆ ಹೋಗುವುದೇ ಮಾನವರಿಗೆ ಸರ್ವ ವಿಧದ ರಕ್ಷಣೆಯಾಗಿದೆ. ಈ ಅಂಶ ಮನಸ್ಸಿನಲ್ಲಿರಿಸಿಕೊಂಡು ಗಾಢವಾದ ದೈವ ಭಕ್ತಿ ಒದಗಿ ಬಂದಲ್ಲಿ ಸರ್ವ ವಿಧದ ದೋಷಗಳಿಗೂ ಸುಲಭ ಪರಿಹಾರ ದೊರಕುವುದು ಎಂಬುದು ಶತ ಸಿಧ್ಧ.

                                                         ಶುಭಮ್ ಭೂಯಾತ್

*********************************************************************************

                                                                 ವಿಚಾರ-೧

                                          ಕಾಲ- ಸರ್ಪ ಯೋಗದ ಬಗ್ಗೆ ಭೀತಿ ಅಗತ್ಯವೇ?
                                               ~~~~~~~~~~~~~~~~~~~~~~~~~~~
                                         ************************************
ಕಾಲ-ಸರ್ಪ ಯೋಗವು ರ‍ಾಹು-ಕೇತುಗಳೆಂಬ ೨ ಗ್ರಹಗಳಿಂದ ಉಂಟಾಗುತ್ತದೆ. ರಾಹು-ಕೇತು ಗ್ರಹಗಳು ಅಪ್ರದಕ್ಷಿಣಾಕಾರವಾಗಿ ಚಲಿಸುತ್ತವೆ.ಉಳಿದ ಗ್ರಹಗಳು ಪ್ರದಕ್ಷಿಣಾಕಾರವಾಗಿ ಚಲಿಸುತ್ತವೆ. ರಾಹು- ಕೇತು ಗ್ರಹಗಳ ಚಲನೆಯ ಕಾಲದಲ್ಲಿ ಉಳಿದ ೭ ಗ್ರಹಗಳು ರಾಹು-ಕೇತುಗಳು ಇರುವ ರಾಶಿಗಳ ಹೊರತಾಗಿ ಮಧ್ಯ ಉಳಿದ ೫ ರಾಶಿಗಳಲ್ಲಿ ಇದ್ದರೆ ಅಪ್ರದಕ್ಷಿಣಾಕಾರವಾಗಿ ೬; ಪ್ರದಕ್ಷಿಣಾಕಾರವಾಗಿ ೬; ಒಟ್ಟು ೧೨ ರೀತಿಯಾಗಿ ಕಾಲ-ಸರ್ಪ ಯೊಗ ಉಂಟಾಗುವುದೆಂದು ಕೆಲವು ಗ್ರಂಥಗಳಲ್ಲಿ ಹೇಳಿದ್ದರೆ ಮತ್ತೆ ಕೆಲವು ಗ್ರಂಥಗಳಲ್ಲಿ ಕೇವಲ ಅಪ್ರದಕ್ಷಿಣಾಕಾರವಾಗಿ ೭ ಗ್ರಹಗಳು ರಾಹು-ಕೇತುಗಳ ಮಧ್ಯ ಇದ್ದರೆ ಮಾತ್ರಾ ಕಾಲ-ಸರ್ಪ ಯೊಗ ಎಂದಿರುವರು. ಕೆಲವು ಗ್ರಂಥಗಳಲ್ಲಿ ಈ ೭ ಗ್ರಹಗಳ ಜೊತೆಯಲ್ಲಿ ಜನ್ಮ ಲಗ್ನವು ಕೂಡಾ ಸೇರಿರ ಬೇಕೆಂದಿರುವರು. ಅಭಿಪ್ರಾಯ ಭೇಧಗಳಿರುವಾಗ ಯಾವುದನ್ನು ಅಳವಡಿಸಿ ಕೊಂಡರೆ ಈ ಯೊಗ ಉಂಟಾಗುವ ಸಂಭವ ಕಡಿಮೆಯೋ ಅದನ್ನು ಅಳವಡಿಸಿಕೊಳ್ಳಬೇಕಾದುದು ಅವಶ್ಯ.ತೀರಾ ಇತ್ತೀಚೆಗೆ ಅಪೂರ್ಣ ಕಾಲ-ಸರ್ಪ ಯೊಗ ಎಂಬ ಯೋಗವನ್ನು ಹೊಸದಾಗಿ ಹೇಳುವುದು ಗಮನಕ್ಕೆ ಬಂದಿದೆ. ಆದರೆ ಅದಕ್ಕೆ ಆಧಾರ ಎಲ್ಲಿಯೂ ನನಗೆ ಸಿಕ್ಕಿಲ್ಲ.ಈ ಕಾಲ-ಸರ್ಪ ಯೋಗದ ಹೆಸರು ಕೇಳಿಯೇ ಜನರು ಹೆದರಿಕೆಗೆ ಒಳಗಾಗುವುದು ಹೆಚ್ಚು.ವಾಸ್ತವವಾಗಿ ಕಾಲ- ಸರ್ಪ ಯೋಗವೆಂಬುದು ಇತರ ಯೋಗಗಳಂತೆ ಒಂದು ಯೋಗ.ಅದರ ಫಲ ಕೆಟ್ಟದಿರ ಬಹುದು.ಅದು ಬೇರೆ ವಿಚಾರ.ಅಷ್ಟೇ ಕೆಟ್ಟ ಫಲದ ಮತ್ತು ಅದಕ್ಕಿಂತಲೂ ಅಧಿಕ ಕೆಟ್ಟ ಫಲಗಳನ್ನೀಯಬಹುದಾದ ಇತರ ಯೋಗಗಳು ಇವೆ.ಆದರೆ ಹೆಸರು ಭೀತಿ ಹುಟ್ಟಿಸುವಂತೆ ಇಲ್ಲ.ಕಾಲ-ಸರ್ಪ ಹೆಸರು ಬಂದುದು ಹೇಗೆಂದು ತಿಳಿದುಕೊಂಡಲ್ಲಿ ಈ ಯೊಗವು ಭೀತಿದಾಯಕವಲ್ಲವೆಂಬ ವಿಚಾರ ಗಮನಾರ್ಹವಾಗಬಹುದು.ರ‍ಾಹು ಗ್ರಹದ ನಕ್ಷತ್ರ ಭರಣಿ.ಅದರ ಅಧಿದೇವತೆ ಯಮ, ಅಂದರೆ ಕಾಲ. ಕೇತು ಗ್ರಹದ ನಕ್ಷತ್ರ ಆಶ್ಲೇಷ. ಅದರ ಅಧಿದೇವತೆ ಸರ್ಪ. ಹಾಗಾಗಿ ರಾಹು- ಕೇತುಗಳಿಂದಾಗುವ ಯೋಗಕ್ಕೆ ಈ ಹೆಸರು ಬಂದಿದೆ. ಆದರೆ ಕೇವಲ ರಾಹು-ಕೇತುಗಳ ಮಧ್ಯೆ ೫ ರಾಶಿಗಳಲ್ಲಿ ಉಳಿದ ಗ್ರಹಗಳು ಇದ್ದಾಕ್ಷಣ ಕಾಲ-ಸರ್ಪ ಯೋಗವಿದೆ ಎಂದು ತೀರ್ಮಾನಿಸುವುದು ತಪ್ಪಾಗುತ್ತದೆ.ಅಲ್ಲಿರುವ ಗ್ರಹಗಳ ಸ್ಥಿತಿ ಗತಿ; ಬಲಾಬಲ ಉಚ್ಚ ನೀಚತ್ವ ಇತ್ಯಾದಿ ವಿಮರ್ಶಿಸಿ ನಿರ್ಧಾರಕ್ಕೆ ಬಂದು ವ್ಯಕ್ತಿಗಳಿಗೆ ಫಲ/ಪರಿಹಾರ ಹೇಳುವುದು ಸೂಕ್ತ ಎಂದು ನನ್ನ ಅನಿಸಿಕೆ.
      ಮುಖ್ಯವಾಗಿ ಗಮನಿಸಬೇಕಾದ ವಿಚಾರವೆಂದರೆ ಜ್ಯೋತಿಷ್ಯಾಚಾರ್ಯರೆಂಬ ಕೀರ್ತಿಗೆ ಭಾಜನರಾಗಿರುವ ವರಾಹಮಿಹಿರಾಚಾರ್ಯರು ತಮ್ಮ ಗ್ರಂಥ ಬೃಹದ್ಜಾತಕದಲ್ಲಿ ಕಾಲ - ಸರ್ಪ ಯೋಗವೆಂಬ ಯೋಗದ ಬಗ್ಗೆ ಎಲ್ಲೂ ಹೇಳಿರುವುದಿಲ್ಲ. ಇದನ್ನು ಗಮನದಲ್ಲಿ ಇರಿಸಿಕೊಳ್ಳುವುದು ಸೂಕ್ತ.
     ಇಷ್ಟು ಓದಿದ ಮೇಲೂ ಕಾಲ- ಸರ್ಪ ಯೋಗದ ಬಗ್ಗೆ ಭೀತಿ ಇದೆಯೇ? ಇದ್ದರೆ ಸುಬ್ರಹ್ಮಣ್ಯ ಸ್ವಾಮಿಯನ್ನು ಮತ್ತು ಮಹಾಗಣಪತಿ ದೇವರ ಧ್ಯಾನ; ಯಥಾ ಸಾಧ್ಯ ಸೇವೆಯಿಂದ ದೋಷಗಳು ಪರಿಹಾರವಾಗುವವು.

                                                        ಶುಭಮಸ್ತು ನಿತ್ಯಮ್
++++++++++++++++++++++++++++++++++++++++++++++++++++++++++++++++++++++++

                                                                    ವಿಚಾರ-೨

                                                ಕುಜದೋಷದ ಬಗ್ಗೆ ನಿಮಗೆಷ್ಟು ಅರಿವಿದೆ?
                                              ++++++++++++++++++++++++++

                            ಕುಜದೋಷದ ಬಗ್ಗೆ ಮಾಹಿತಿ ನೀಡುವ ಅಗತ್ಯವು ಇಂದು ಎದ್ದು ಕಾಣುತ್ತಲಿದೆ.ಸರಿಯಾಗಿ ವಿಮರ್ಶಿಸದೆ ಮೇಲ್ನೋಟಕ್ಕೆ ಕಾಣುವ ಕುಜದೋಷವನ್ನು ಅರುಹಿ ಜನರನ್ನು ಭೀತಿಗೊಳಪಡಿಸುವ ಪ್ರವೃತ್ತಿ ಅಲ್ಲಲ್ಲಿ ಕಂಡುಬರುತ್ತಿದೆ.ವಾಸ್ತವವಾಗಿ ಕುಜದೋಷ ಯಾರಿಗಿದೆ ಎಂಬ ಮಾಹಿತಿ ಮುಂದೆ ನೀಡುತ್ತಲಿರುವೆ.

     ಕನ್ಯಾ-ವರರ ಜಾತಕ ಹೊಂದಾಣಿಕೆಯಲ್ಲಿ ಕುಜದೋಷವನ್ನು ಪರಿಶೀಲಿಸುವುದು ಸಂಪ್ರದಾಯ.ಜನ್ಮ ಕುಂಡಲಿಯಲ್ಲಿ ಲಗ್ನ,ಶುಕ್ರ, ಚಂದ್ರ  ಸ್ಥಿತ ಸ್ಥಾನಗಳಿಂದ ೧,೨,೪,೫,೭,೮,೧೨ ನೇ ಸ್ಥಾನಗಳಲ್ಲಿ ಕುಜನು ಇದ್ದರೆ ಕುಜ ದೋಷ ಇದೆ ಎಂಬುದಾಗಿ ಮೇಲ್ನೋಟದ ತೀರ್ಮಾನಕ್ಕೆ ಬರುವುದು ಬಹುತೇಕ ಅನುಸರಿಸುವ ಕ್ರಮ .ಆದರೆ ಈ ರೀತಿಯಾಗಿ ತೀರ್ಮಾನಕ್ಕೆ ಬಂದರೂ ಅಂತಹಾ ದೋಷಗಳಿಗೆ ಅಪವಾದಗಳು ಕೂಡಾ ಇವೆ ಅಂದರೆ ಪರಿಹಾರಗಳೂ ಇವೆ  ಎಂಬುದನ್ನು ಗಮನಿಸುವುದು ಅಗತ್ಯ ಇದೆ.ನಾನು ತಿಳಿದುಕೊಂಡಂತೆ ಕುಜದೋಷಕ್ಕೆ ೨೨ ರೀತಿಯಲ್ಲಿ ಅಪವಾದಗಳು ಇವೆ.ಆ ೨೨ ರೀತಿಯ ಪರಿಹಾರಗಳನ್ನು ಕುಂಡಲಿಯಲ್ಲಿಯೇ ಪರಿಶೀಲಿಸಬೇಕಾಗಿದೆ. ಅವುಗಳನ್ನು ಅನ್ವಯಿಸಿ ಪರಿಶೀಲನೆ ಮಾಡಿದಾಗ ಹೆಚ್ಚಿನ ಜಾತಕಗಳಲ್ಲಿ ಕುಜ ದೋಷ ಜಾತಕದಲ್ಲಿಯೇ ಪರಿಹಾರ ಆಗಿರುತ್ತದೆ.ಆ ಬಗ್ಗೆ ವಿವರಿಸುವುದು ಈ ಬರಹದ ಗುರಿ.

.[೧] ಕರ್ಕಾಟಕ ಮತ್ತು ಸಿಂಹ ಲಗ್ನ ಸಂಜಾತರಿಗೆ ಕುಜದೋಷ ಇಲ್ಲ.

 [೨] ೭ ನೇ ರಾಶಿಯಲ್ಲಿರುವ ಕುಜನನ್ನು ಗುರು ನೋಡಿದಲ್ಲಿ ದೋಷ ಪರಿಹಾರ.

 [೩] ಕನ್ಯಾ ಜಾತಕದಲ್ಲಿ ಜನ್ಮ ಲಗ್ನದಿಂದ ೭ ನೇ ರಾಶಿಯಲ್ಲಿ ಆ ರಾಶಿಯ ಅಧಿಪತಿ ಅಥವಾ      ಯಾವುದಾದರೂ ಶುಭ ಗ್ರಹ ಇದ್ದರೆ ಸಂತಾನ ದೋಷ, ವೈಧವ್ಯ ದೋಷ, ಕುಜ ದೋಷ ಪರಿಹಾರ.

[೪] ೭ ನೇ ಸ್ಥಾನದ ಅಧಿಪತಿ ೭ ನೇ ಮನೆಯಲ್ಲಿ ಇದ್ದರೆ ಕುಜ ದೋಷ ಇಲ್ಲ.

[೫] ಕನ್ಯಾ- ವರರ ಜಾತಕಗಳಲ್ಲಿ ಸಮಾನವಾದ ಕುಜ ದೋಶ ಇದ್ದಲ್ಲಿ ಅಥವಾ ಕುಜದೋಶಕ್ಕೆ   ಸಮಾನವಾದ ಪಾಪ ಗ್ರಹ ದೋಷ ಇದ್ದಲ್ಲಿ[ರವಿ,ಶನಿ,ಕೇತು,ರಾಹು, ಕುಜ-ಇವುಗಳು ಪಾಪ ಗ್ರಹರು]ಕುಜ ದೋಷ ಪರಿಹಾರ.

[೬]ಜನ್ಮ ಲಗ್ನದಿಂದ ೧,೪,೭,೮,೧೨ರಲ್ಲಿ ಶನಿ ಇದ್ದರೆ ಕುಜ ದೋಷ ಪರಿಹಾರ.

[೭]ಕನ್ಯಾ-ವರರ ಜಾತಕಗಳಲ್ಲಿ ಒಂದರಲ್ಲಿ ಕುಜದೋಶ ಇದ್ದು ಮತ್ತೊಂದರಲ್ಲಿ ೧,೪,೭,೮,೧೨ರಲ್ಲಿ ಶನಿ ಇದ್ದರೆ ಕುಜ ದೋಷ ಪರಿಹಾರ.

[೮]ಲಗ್ನದಿಂದ೨,೪,೭,೮,೧೨ರಲ್ಲಿರುವ  ಕುಜನು ಗುರುವಿನೊಟ್ಟಿಗೆ ಇದ್ದರೆ ಅಥವಾ ಬುಧ,ಗುರು ಗಳಿಂದ ನೋಡಲ್ಪಟ್ಟರೆ ಕುಜದೋಷ ಪರಿಹಾರ.

[೯]ಕುಜನು ಗುರು ಅಥವಾ ಚಂದ್ರನ ಒಟ್ಟಿಗೆ ಇದ್ದರೆ ಅಥವಾ ಅವರಿಂದ ನೋಡಲ್ಪಟ್ಟರೆ ಕುಜ ದೋಷ ಪರಿಹಾರ.

[೧೦]ಮೇಷ,ವೃಶ್ಚಿಕ,ಮಕರ,ಕರ್ಕಟಕ,ಸಿಂಹ,ಧನುಸ್ಸು,ಮೀನ ಈ ರಾಶಿಗಳಲ್ಲಿ ಕುಜ ಇದ್ದರೆ ಕುಜ ದೋಷ ಇಲ್ಲ.

[೧೧]ಕುಜನು, ರವಿ, ಚಂದ್ರ,ಗುರು ನವಾಂಶದಲ್ಲಿ ಇದ್ದರೆ ಕುಜದೋಷ ಇಲ್ಲ.

[೧೨]ಕುಜನು ಕರ್ಕಾಟಕ,ಮಿಥುನ,ಕನ್ಯಾ ರಾಶಿಗಳಲ್ಲಿ ಇದ್ದರೆ ಅಥವಾ ಅಸ್ತನಾಗಿ ಇದ್ದರೆ ಶುಭಾಶುಭ ಫಲ ಇಲ್ಲವಾದ ಕಾರಣ ಕುಜ ದೋಷ ಇಲ್ಲ.

[೧೩]ಕನ್ಯಾ-ವರರ ಜಾತಕಗಳಲ್ಲಿ ಒಂದರಲ್ಲಿ ಕುಜ ದೋಷವಿದ್ದು ಮತ್ತೊಂದರಲ್ಲಿ ಅದೆ ರಾಶಿಯಲ್ಲಿ ಶನಿ,ಕುಜ,ಅಥವಾ ಯಾವುದಾದರೂ ಪಾಪಗ್ರಹ ಇದ್ದಲ್ಲಿ ಕುಜ ದೋಷ ಇಲ್ಲ.

[೧೪]ಜಾತಕದಲ್ಲಿ ಯಾವ ರಾಶಿಯಲ್ಲಿ ಕುಜನು ಇದ್ದಾನೋ ಆ ರಾಶಿಯ ಅಧಿಪತಿ ೧,೪,೭,೧೦,೫,೯ರಲ್ಲಿ ಇದ್ದರೆ ಕುಜ ದೋಷ ಪರಿಹಾರ.

[೧೫]ಮೇಷ ಲಗ್ನವಾಗಿ ಅಲ್ಲಿ ಕುಜನು ಇದ್ದರೆ,ಮಕರ ಲಗ್ನವಾಗಿ ಧನು ರಾಶಿಯಲ್ಲಿ ಕುಜನು ಇದ್ದರೆ,ಸಿಂಹ ಲಗ್ನವಾಗಿ ವೃಶ್ಚಿಕದಲ್ಲಿ ಕುಜನು ಇದ್ದರೆ,ಕರ್ಕಾಟಕ ಲಗ್ನವಾಗಿ ಮಕರದಲ್ಲಿ ಕುಜನು ಇದ್ದರೆ, ಧನುರ್ಲಗ್ನವಾಗಿ ಕರ್ಕಾಟಕದಲ್ಲಿ ಕುಜನು ಇದ್ದರೆ ಆಯಾಲಗ್ನದಲ್ಲಿ ಹುಟ್ಟಿದವರಿಗೆ ಕುಜ ದೋಷ ಇಲ್ಲ.
.

[೧೬]ಅಶ್ವಿನಿ,ಮೃಗಶಿರೆ,ಪುನರ್ವಸು,ಪುಷ್ಯ,ಆಶ್ಲೇಶಾ,ಉತ್ತರಾ,ಸ್ವಾತಿ,ಅನುರಾಧ,ಪೂರ್ವಾಷಾಢ, ಉತ್ತರಾಷಾಢ,ಶ್ರವಣ,ಉತ್ತರಾಭಾದ್ರ,ರೇವತಿ--ಈ ನಕ್ಷತ್ರದವರಿಗೆ ಕುಜದೋಷ ಇಲ್ಲ.

[೧೭]ಮಿಥುನ-ಕನ್ಯಾ ಲಗ್ನಗಳಲ್ಲಿ ಹುಟ್ಟಿದವರಿಗೆ ಕರ್ಕಟಕ-ತುಲಾ ರಾಶಿಗಳಲ್ಲಿ ಕುಜನು ಇದ್ದರೆ,ವೃಷಭ-ಸಿಂಹ ಲಗ್ನದವರಿಗೆ ಮಿಥುನ- ಕನ್ಯಾ ರಾಶಿಗಳಲ್ಲಿ ಕುಜನು ಇದ್ದರೆ ದೋಷ ಇಲ್ಲ.

[೧೮]ಮೇಷ-ವೃಶ್ಚಿಕ ಲಗ್ನದವರಿಗೆ ಕರ್ಕಟಕ- ಕುಂಭ ರಾಶಿಗಳಲ್ಲಿ, ಮಕರ- ಸಿಂಹ ಲಗ್ನದವರಿಗೆ ಮೇಷ- ವೃಶ್ಚಿಕ ರಾಶಿಗಳಲ್ಲಿ ಕುಜನು ಇದ್ದರೆ ಕುಜ ದೋಷ ಇಲ್ಲ.

[೧೯]ಮಕರ-ಕರ್ಕಟಕ ಲಗ್ನದವರಿಗೆ ಕರ್ಕಟಕ-ಮಕರ ರಾಶಿಗಳಲ್ಲಿ ಕುಜನು ಇದ್ದರೆ ಕುಜ ದೋಷ ಇಲ್ಲ ಮತ್ತು ಕರ್ಕಟಕ-ಮಕರ ಲಗ್ನದವರಿಗೆ ಮಕರ-ಕರ್ಕಟಕ ರಾಶಿಗಳಲ್ಲಿ ಕುಜನು ಇದ್ದರೆ ದೋಷ ಇಲ್ಲ.

[೨೦]ಧನು-ಮೀನ ಲಗ್ನದವರಿಗೆ ಕರ್ಕಟಕ-ತುಲಾರಾಶಿಗಳಲ್ಲಿ,ವೃಷಭ-ಸಿಂಹ ಲಗ್ನದವರಿಗೆ ಧನು-ಮೀನ ರಾಶಿಗಳಲ್ಲಿ ಕುಜನು ಇದ್ದರೆ ದೋಷ ಇಲ್ಲ.

[೨೧]ವೃಷಭ-ತುಲಾ ಲಗ್ನದವರಿಗೆ ಮೇಷ-ಕನ್ಯಾ ರಾಶಿಗಳಲ್ಲಿ,ವೃಶ್ಚಿಕ-ಮಿಥುನ ಲಗ್ನದವರಿಗೆ ವೃಷಭ- ತುಲಾ ರಾಶಿಗಳಲ್ಲಿ ಕುಜನು ಇದ್ದರೆ ದೋಷ ಇಲ್ಲ.

[೨೨]ಕುಂಭ-ಸಿಂಹ ಲಗ್ನದವರಿಗೆ ಕುಜನು ಯಾವರಾಶಿಯಲ್ಲಿ ಇದ್ದರೂ ದೋಷ ಇಲ್ಲ. ಕುಂಭ-ಸಿಂಹ ರಾಶಿಗಳು ಲಗ್ನದಿಂದ ೧-೨-೪-೫-೭-೮-೧೨ ನೇ ರಾಶಿಗಳಾಗಿದ್ದು ಅಲ್ಲಿ ಕುಜನು ಇದ್ದರೆ ಕುಜ ದೋಷ ಇಲ್ಲ.

ಈ ರೀತಿಯಾಗಿ ಕುಜದೋಷಗಳಿಗೆ ಅಪವಾದ ಅಥವಾ ಪರಿಹಾರಗಳನ್ನು ಶಾಸ್ತ್ರಕಾರರು ತಿಳಿಸಿರುವ ಕಾರಣ ಕೆಲವೇ ಕೆಲವು ಜಾತಕಗಳಲ್ಲಿ  ಮಾತ್ರಾ ಕುಜ ದೋಷ ಇರಬಹುದಾಗಿದೆ. ಈ ವಿಚಾರವನ್ನು ಜ್ಯೋತಿಷಿಗಳು ಗಮನದಲ್ಲಿರಿಸಿಕೊಂಡು ಕುಜದೋಷದ ಬಗ್ಗೆ ಪರಿಶೀಲಿಸ ಬೇಕೆಂಬುದು ಶಾಸ್ತ್ರಕಾರರ ಮತ.

                                                     ಮಂಗಳಮ್ ಶುಭ ಮಂಗಳಮ್

 &&&&&&&&&&&&&&&&&&&&&&&&&&&&&&&&&&&&&&&&&&&&&&&&&&&&&&


                                                                          ವಿಚಾರ-೩

                                                    ಕನ್ಯಾವರರ ಜಾತಕಗಳ ಹೊಂದಾಣಿಕೆ

                                                        ದೋಷಗಳಿಗೆ ಅಪವಾದಗಳು 

++++++++++++++=============++++++++++++++++==============++++++++++++++

 ಕನ್ಯಾವರರ ವಿವಾಹವನ್ನು ನಿಶ್ಚಯಮಾಡುವ ಮೊದಲು ಅವರ ಜಾತಕಗಳು ಹೊಂದಾಣಿಕೆಯಾಗುತ್ತಿವೆಯೇ ಎಂಬುದನ್ನು ಪರಿಶೀಲಿಸುವುದು ಎಲ್ಲಾ ವರ್ಣದವರಲ್ಲಿಯೂ ಸರ್ವೇಸಾಮಾನ್ಯವಾಗಿದೆ.ಕನ್ಯಾವರರ ಜಾತಕಾನುಕೂಲವನ್ನು ದಶಕೂಟ[೧೦ ಕೂಟ]ಗಳನ್ನು ಪರಿಶೀಲಿಸಿ ನಿರ್ಧರಿಸುವುದು ಹೆಚ್ಚಿನ ಪ್ರದೇಶಗಳಲ್ಲಿ ರೂಡಿಯಲ್ಲಿದೆ.ಕೆಲವು ಪ್ರದೇಶಗಳಲ್ಲಿ ಅಷ್ಟ[೮] ಅಥವಾ ದ್ವಾದಶ[೧೨]ಕೂಟಗಳನ್ನು ಪರಿಶೀಲಿಸುವ ಕ್ರಮವಿದೆ.ಮತ್ತೆ ಕೆಲವು ಪ್ರದೇಶಗಳಲ್ಲಿ ೧೫ ಕೂಟಗಳನ್ನು ಪರಿಶೀಲಿಸುವುದೂ ಇದೆ.ಬಹುತೇಕ ದಶ ಕೂಟಗಳನ್ನು ಪರಿಶೀಲಿಸುವುದು ರೂಢಿಯಲ್ಲಿರುವ ಕಾರಣ ಇಲ್ಲಿ ಆ ದಶ ಕೂಟಗಳ ಪರಿಶೀಲನೆಯಲ್ಲಿ ಕಂಡು ಬರಬಹುದಾದ ದೋಷಗಳಿಗೆ ಶಾಸ್ತ್ರಕಾರರು ತಿಳಿಸಿದ ಅಪವಾದಗಳನ್ನು ದಾಖಲಿಸುವ ಬಯಕೆ ನನ್ನದು. ಇವುಗಳ ಆಧಾರದಿಂದ ಜಾತಕಗಳ ಹೊಂದಾಣಿಕೆ ಮಾಡುವುದು ಸತ್ಸಂಪ್ರದಾಯವಾಗಬಹುದು.

೧ ದಿನಕೂಟ:-
           ಸ್ತ್ರೀ ದೀರ್ಘಕೂಟ, ಗಣಕೂಟಗಳು ಶುಭವಾಗಿ ಹೊಂದಾಣಿಕೆಯಾಗುತ್ತಿದ್ದಲ್ಲಿ ದಿನಕೂಟ ಹೊಂದಾಣಿಕೆ ಅಶುಭವಾದರೂ ಭಾದಕವಲ್ಲ.

೨ ಗಣಕೂಟ:-
         [ಅ] ಗ್ರಹ ಮೈತ್ರಿ,ರಾಶಿಕೂಟಗಳು ಹೊಂದಾಣಿಕೆಯಾಗುವುದಾದಲ್ಲಿ ಗಣಕೂಟ ಅಶುಭವಾದರೂ ಭಾದಕವಲ್ಲ.

 ಜನ್ಮ ರಾಶಿಗಳ ಅಧಿಪತಿಗಳಾಗಲೀ,ಜನ್ಮ ರಾಶಿಗಳ ನವಾಂಶಾಧಿಪತಿಗಳಾಗಲೀ ಪರಸ್ಪರ ಮಿತ್ರರಾಗಿದ್ದಲ್ಲಿ ಗಣಕೂಟ ಹೊಂದಾಣಿಕೆಯಾಗದಿದ್ದರೂ ಭಾದಕವಲ್ಲ.

 [ಆ] ಗ್ರಹ ಮೈತ್ರಿ, ರಜ್ಜು, ನಾಡಿ ಕೂಟಗಳು ಶುಭವಾಗಿದ್ದಲ್ಲಿ ಕನ್ಯೆಯದು ರಾಕ್ಷಸ ಗಣವಾಗಿ ವರನದು ಮನುಷ್ಯಗಣವಾದರೂ ದೋಷವಲ್ಲ.

[ಇ] ಸ್ತ್ರೀ ದೀರ್ಘ ಕೂಟವಿದ್ದರೂ, ರಾಶ್ಯಧಿಪತಿ ಕೂಟವಿದ್ದರೂ ಗಣಕೂಟ  ಅಶುಭವಾದರೂ ದೋಷವಲ್ಲ.

[ಈ] ಕನ್ಯಾ ಜನ್ಮ ನಕ್ಷತ್ರದಿಂದ ವರನ ಜನ್ಮ ನಕ್ಷತ್ರವು ೧೪ ನಕ್ಷತ್ರಗಳ ನಂತರವಿದ್ದಲ್ಲಿ ಗಣಕೂಟವು ಅಶುಭವಾದರೂ ಭಾದಕವಿಲ್ಲ.

೩ ಮಾಹೇಂದ್ರ ಕೂಟ:-
                ಗ್ರಹ ಮೈತ್ರಿ. ರಜ್ಜು ಕೂಟಗಳಿದ್ದಲ್ಲಿ ಮಾಹೇಂದ್ರಕೂಟವು ಅಶುಭವಾಗಿದ್ದರೂ ದೋಷವಿಲ್ಲ.

೪ ಸ್ತ್ರೀದೀರ್ಘ ಕೂಟ:-
               ರಾಶಿ ಮತ್ತು ಗ್ರಹಮೈತ್ರಿ ಕೂಟಗಳು ಹೊಂದಾಣಿಕೆಯಾಗುತ್ತಿದ್ದರೆ ಅಥವಾ ರಾಶ್ಯಧಿಪತಿಗಳಿಗೆ ಮೈತ್ರಿಯಿದ್ದಲ್ಲಿ ಯಾ ಕನ್ಯೆಯ ಜನ್ಮ ನಕ್ಷತ್ರದಿಂದ ವರನ ಜನ್ಮ ನಕ್ಷತ್ರವು ೧೩ನೇ ನಕ್ಷತ್ರದ ನಂತರದ ನಕ್ಷತ್ರವಾಗಿದ್ದಲ್ಲಿ ಸ್ತ್ರೀದೀರ್ಘಕೂಟವು ಹೊಂದಾಣಿಕೆಯಾಗದಿದ್ದರೂ ಭಾದಕವಲ್ಲ.

೫ ಯೋನಿ ಕೂಟ:- ರಾಶಿ ಮತ್ತು ವಶ್ಯ ಕೂಟಗಳು ಶುಭವಾಗಿದ್ದಲ್ಲಿ ಯೋನಿಕೂಟವು ಹೊಂದಾಣಿಕೆಯಾಗದಿದ್ದರೂ ಬಾಧಕವಲ್ಲ.

೬ ರಾಶಿಕೂಟ:-
        [ಅ] ಕನ್ಯಾ ವರರ ಜನ್ಮ ನಕ್ಷತ್ರಗಳಿಗೆ ವೇಧೆಯಿಲ್ಲದೆ ಇದ್ದು ರಾಶ್ಯಧಿಪತಿಗಳಿಗೆ ಮೈತ್ರಿ ಯೋಗವಾಗಲೀ, ಏಕರಾಶ್ಯಧಿಪತಿತ್ವವಾಗಲೀ ಇದ್ದು ಆ ರಾಶಿಗಳು ವಶ್ಯವಾಗಿದ್ದಲ್ಲಿ ಷಷ್ಠಾಷ್ಟಕ ದೋಷದ ಭಾದಕವಿಲ್ಲ.

  [ಆ] ರಾಶಿಕೂಟವು ೨-೧೨; ೯-೫; ೬-೮ ಆದರೂ ಕನ್ಯೆಯ ನಕ್ಷತ್ರ ಗಣವು ರಾಕ್ಷಸ ಗಣವಾದರೂ,ಏಕ ರಾಶ್ಯಧಿಪತಿತ್ವವಿದ್ದಲ್ಲಿ ಅಥವಾ ಮೈತ್ರ್ಯಾಧಿಪತಿತ್ವವಿದ್ದಲ್ಲಿ ಕನ್ಯೆಯ ನಕ್ಷತ್ರ ಗಣವು ರಾಕ್ಷಸ ಗಣವಾಗಿದ್ದರೂ ಅಶುಭ ರಾಶಿ ಕೂಟದ ಭಾದಕವಿಲ್ಲ.

  [ಇ] ಮೇಷ-ಕನ್ಯಾ; ತುಲಾ-ಮೀನ;ಧನು-ವೃಷಭ; ಮಿಥುನ-ವೃಶ್ಚಿಕ;ಕುಂಭ-ಕರ್ಕಟಕ;ಸಿಂಹ-ಮಕರ ಇವುಗಳಲ್ಲಿ ವಿಷಮರಾಶಿಯು ಕನ್ಯೆಯದಾಗಿದ್ದರೆ ಷಷ್ಠಾಷ್ಟಕ ದೋಷದ ಭಾದಕವಿಲ್ಲ.ವಿಷಮ ರಾಶಿಯಲ್ಲವಾದರೆ ದೋಷವೆಂದು ಪರಿಗಣಿಸಬಹುದಾಗಿದೆ.

  [ಈ] ಮೀನ-ಮೇಷ;ಕರ್ಕಟಕ-ಸಿಂಹ;ಸಿಂಹ-ಕನ್ಯಾ;ಮಕರ-ಕುಂಭ;ತುಲಾ-ಕನ್ಯಾ;ಧನು-  ವೃಶ್ಚಿಕ;ವೃಷಭ-ಮಿಥುನ ಇವುಗಳು ದ್ವಿದ್ವಾದಶರಾಶಿಗಳಾದಲ್ಲಿ ಶುಭಕೂಟವೆಂದು ಪರಿಗಣಿಸಬೇಕು.

[ಉ]ಕುಂಭ-ಮೀನ;ಮೇಷ-ವೃಷಭ;ಮಿಥುನ-ಕರ್ಕಟಕ;ತುಲಾ-ವೃಶ್ಚಿಕ;ಧನು-ಮಕರ;ಇವುಗಳು ಅಶುಭ ದ್ವಿದ್ವಾದಷ ಕೂಟಗಳಾಗಿವೆ.

 [ಊ]ಮೇಷ-ಸಿಂಹ;ವೃಷಭ-ಕನ್ಯಾ;ಸಿಂಹ-ಧನು;ತುಲಾ-ಕುಂಭ;ವೃಶ್ಚಿಕ-ಮೀನ;ಧನು-ಮೇಷ;  ಮಕರ-ವೃಷಭ;ಇವುಗಳು ೯-೫ನೇ ರಾಶಿಗಳಾಗಿದ್ದರೆ ನವ ಪಂಚಮ ದೋಷವಿಲ್ಲ.

  [ಋ]ಸಿಂಹ-ಮೀನ;ತುಲಾ- ವೃಷಭ;ಕುಂಭ-ಕನ್ಯಾ;ಮೇಷ- ವೃಶ್ಚಿಕ;ಧನು-ಕರ್ಕಾಟಕ;ಇವುಗಳು ೬-೮ನೇ ರಾಶಿಗಳಾಗಿದ್ದಲ್ಲಿ ಶುಭ ಷಷ್ಠಾಷ್ಟ ಕೂಟವೆಂದು ಪರಿಗಣಿಸಬೇಕು.

  [ೠ]ರಾಶಿ,ಗಣ,ರಜ್ಜುಕೂಟಗಳು ಅಶುಭವಾದರೂ,ರಾಶಿಕೂಟವು ಷಷ್ಠಾಷ್ಟಕವಾದರೂ,ಕನ್ಯೆಯ ನಕ್ಷತ್ರಗಣವು ರಾಕ್ಷಸಗಣವಾದರೂ, ಕನ್ಯಾವರರ ರಾಶ್ಯಧಿಪತಿ ಒಬ್ಬನೇ ಆಗಿದ್ದರೆ ಅಥವಾ ರಾಶ್ಯಧಿಪತಿಗಳು ಪರಸ್ಪರ ಮಿತ್ರರಾಗಿದ್ದರೆ ರಾಶಿ ಕೂಟವನ್ನು ಶುಭ ಕೂಟವೆಂದು ಪರಿಗಣಿಸಬೇಕು.

 [ಎ] ರಜ್ಜು; ಸ್ತ್ರೀ ದೀರ್ಘ ಕೂಟಗಳು ಶುಭವಾಗಿದ್ದರೂ ರಾಶಿಕೂಟವು ೨-೧೨[ದ್ವಿದ್ವಾದಶ] ;೯-೫[ನವ ಪಂಚಮ];೬-೮[ಷಷ್ಠ ಅಷ್ಟ] ಆಗಿದ್ದರೂ ಏಕರಾಶ್ಯಧಿಪತಿತ್ವ;ಅಥವಾ ಪರಸ್ಪರ ಮಿತ್ರತ್ವವಿದ್ದಲ್ಲಿ ರಾಶಿ ಕೂಟವು ಶುಭವೆಂದು ಪರಿಗಣಿಸಬೇಕು.

 [ಏ]ರಾಶಿ ಕೂಟವು ೨-೧೨[ದ್ವಿ ದ್ವಾದಶ] ಆಗಿದ್ದರೂ ಕನ್ಯೆಯ ರಾಶಿ ಮೀನಾದಿಯಾಗಿ {ಮೀನ ರಾಶಿಯಿಂದ ಎಣಿಸಲಾಗಿ}ಯುಗ್ಮ{ಸಮ} ರಾಶಿಯಾಗಿದ್ದರೆ ರಾಶಿ ಕೂಟವು ಶುಭವೆಂದು ಪರಿಗಣಿಸಬೇಕು.

 [ಐ] ವಶ್ಯ ಕೂಟ;ದಿನಕೂಟ; ಪರಸ್ಪರ ಮೈತ್ರಿ ಯಾ ಏಕಾಧಿಪತಿತ್ವವಿದ್ದಲ್ಲಿ ೨-೧೨[ದ್ವಿದ್ವಾದಶ];೬-೮[ಷಷ್ಠಾಷ್ಟಕ]೫-೯[ಪಂಚಮ ನವಮ] ರಾಶಿಕೂಟಗಳನ್ನು ಶುಭ ಕೂಟವೆಂದು ಪರಿಗಣಿಸಬೇಕು.

 [ಒ] ವರನ ಜನ್ಮ ರಾಶಿಯು ಸಮರಾಶಿಯಾಗಿದ್ದಲ್ಲಿ ೬-೮[ಷಷ್ಠಾಷ್ಟಕ]ದೋಷವಿಲ್ಲವೆಂದು ಪರಿಗಣಿಸಬೇಕು.

 [ಓ] ಮೇಷ-ಸಿಂಹ;ಕರ್ಕಟಕ-ವೃಶ್ಚಿಕಗಳು ೫-೯[ಪಂಚಮ ನವಮ] ಆದರೂ ಶುಭವೆಂದು ಪರಿಗಣಿಸಬೇಕು.

 [ಔ] ಕನ್ಯಾವರರ ರಾಶಿಗಳು ಪರಸ್ಪರ ಚತುರ್ಥ ದಶಮ[೪-೧೦] ಅಥವಾ ತೃತೀಯ ಏಕಾದಶ[೩-೧೧]ಆದರೂ ಶುಭವೆಂದು ಕೆಲವು ಶಾಸ್ತ್ರಕಾರರ ಅಭಿಮತವಿದೆ.

 ೭ ಗ್ರಹ ಮೈತ್ರಿ ಕೂಟ:-
                 [ಅ] ಸ್ತ್ರೀ ದೀರ್ಘ; ನಾಡಿ; ರಜ್ಜು;ರಾಶಿ ಕೂಟಗಳು ಶುಭವಾಗಿದ್ದಲ್ಲಿ ಗ್ರಹ ಮೈತ್ರಿ ಇಲ್ಲದಿದ್ದರೂ ಭಾಧಕವಲ್ಲ.
 [ಆ]ಸ್ತ್ರೀ ದೀರ್ಘ ಕೂಟವಿದ್ದು, ಕನ್ಯಾವರರ ರಾಶಿಗಳು ಸಮ ಸಪ್ತಕ[೭-೭];ಮತ್ತು ೩-೧೧ ನೇ ರಾಶಿಗಳ ಅಧಿಪತಿಗಳ ಪೈಕಿ ಯಾರಾದರೂ ಒಬ್ಬರು ಮಿತ್ರರಾಗಿದ್ದಲ್ಲಿ, ಮಿತ್ರ-ಶತ್ರು ಸಮವಾಗಿಯೂ, ಸಮ-ಮಿತ್ರವು ಮಿತ್ರವಾಗಿಯೂ ಆಗುವುದರಿಂದ ಗ್ರಹಮೈತ್ರಿ ಕೂಟವನ್ನು ಶುಭವೆಂದು ಪರಿಗಣಿಸಬೇಕು.

 [ಇ]ಕನ್ಯಾವರರ ಜನ್ಮ ರಾಶ್ಯಧಿಪತಿಗಳು ಶತ್ರುಗಳಾಗಿದ್ದರೂ ಕನ್ಯಾವರರ ಚಂದ್ರ ನವಾಂಶಾಧಿಪತಿಗಳು ಬಲಯುಕ್ತರಾಗಿದ್ದು ಅವರಿಗೆ ಮಿತ್ರತ್ವವಿದ್ದಲ್ಲಿ ಗ್ರಹಮೈತ್ರಿಕೂಟವನ್ನು ಶುಭವೆಂದು ಪರಿಗಣಿಸಬೇಕು.

 [ಈ]ಕನ್ಯಾವರರ ಜನ್ಮ ರಾಶ್ಯಧಿಪತಿಗಳಿಗೆ ಮಿತ್ರತ್ವ,ಅಥವಾ ಕನ್ಯಾವರರ ಜನ್ಮ ನಕ್ಷತ್ರ ನವಾಂಶ ರಾಶ್ಯಧಿಪತಿಗಳು ಮಿತ್ರರಾಗಿದ್ದರೂ ಗ್ರಹಮೈತ್ರಿ ಕೂಟ ಶುಭವೆಂದು ಪರಿಗಣಿಸಬೇಕು.

 ೮ ರಜ್ಜು ಕೂಟ:-
               ದಿನಕೂಟ;ಮಾಹೇಂದ್ರಕೂಟ;ರಾಶಿಕೂಟ; ಗ್ರಹಮೈತ್ರಿಕೂಟಗಳು ಶುಭವಾಗಿದ್ದಲ್ಲಿ ಅಶುಭ ರಜ್ಜು ಕೂಟವನ್ನು ದೋಷವೆಂದು ಪರಿಗಣಿಸದೆ ಶುಭವೆಂದು ಪರಿಗಣಿಸಬೇಕು.

 ೯  ನಾಡಿ ಕೂಟ:-

     [ಅ]ಮಾಹೇಂದ್ರ ಕೂಟ, ದಿನ ಕೂಟ, ಯೋನಿಕೂಟ,ಗ್ರಹ ಮೈತ್ರಿ ಕೂಟಗಳು ಶುಭವಾಗಿದ್ದಲ್ಲಿ ಅಶುಭ ನಾಡಿ ಕೂಟವಾಗಿದ್ದರೂ ಶುಭವೆಂದು ಪರಿಗಣಿಸಬೇಕು.

   [ಆ]ಕನ್ಯಾವರರ ಜನ್ಮ ನಕ್ಷತ್ರವು ಏಕರಾಶಿಯಾಗಿ ಭಿನ್ನ ನಕ್ಷತ್ರವಾಗಿದ್ದರೂ,ಅಥವಾ ಒಂದೇ ನಕ್ಷತ್ರವಾವಾಗಿ ಭಿನ್ನರಾಶಿಯಾಗಿದ್ದರೂ ನಾಡಿ ಕೂಟ ದೋಷವಿಲ್ಲ.

 [ಇ] ಕನ್ಯಾವರರ ಜನ್ಮ ನಕ್ಷತ್ರವು ಆದಿ ನಾಡಿಯಾಗಿ ಅಶ್ವಿನಿ,ಆರ್ದ್ರೆ,ಪುನರ್ವಸು,ಉತ್ತರೆ,ಹಸ್ತ,ಜ್ಯೇಷ್ಠ,ಮೂಲ,ಶತಭಿಷೆ,ಪೂರ್ವಾಭದ್ರೆಯಾಗಿದ್ದರೆ;ಹಾಗೆಯೇ ಮಧ್ಯ ನಾಡಿಯ ಭರಣಿ,ಮೃಗಶಿರಾ,ಪುಷ್ಯಾ,ಹುಬ್ಬೆ[ಪೂರ್ವಾ ಪಲ್ಗುಣ],ಚಿತ್ರ, ಅನುರಾಧ,ಪೂರ್ವಾಷಾಢ,ಉತ್ತರಾಭದ್ರೆಯಾಗಿದ್ದರೆ;ಅದರಂತೆಯೇ ಅಂತ್ಯ ನಾಡಿಯ ಕೃತ್ತಿಕಾ,ಆಶ್ಲೇಷಾ,ಮಖಾ[ಮಘಾ],ಸ್ವಾತಿ,ವಿಶಾಖಾ,ಉತ್ತರಾಷಾಢ,ಶ್ರವಣ,ರೇವತಿಯಾಗಿದ್ದರೆ ಏಕನಾಡಿ ದೋಷವಿಲ್ಲ.

 [ಈ] ವಿಶಾಖಾ, ಅನುರಾಧಾ, ಧನಿಷ್ಟ, ರೇವತಿ,ಹಸ್ತ,ಸ್ವಾತಿ,ಆರ್ದ್ರಾ,ಪೂರ್ವಾಭದ್ರಾ -ಈ ಎಂಟು ನಕ್ಷತ್ರಗಳಲ್ಲಿ ಕನ್ಯೆಅಥವಾ ವರ ಈ ಇಬ್ಬರ ಪೈಕಿ ಒಬ್ಬರು ಜನಿಸಿದ್ದರೆ ನಾಡಿ ದೋಷವಿಲ್ಲ. ಇದು ಶುಭ ಫಲದಾಯಕವಾಗುವುದು.

[ಉ] ಉತ್ತರಾಭದ್ರಾ,ರೇವತಿ,ರೋಹಿಣಿ,ವಿಶಾಖಾ,ಶ್ರವಣ,ಆರ್ದ್ರಾ,ಪುಷ್ಯ,ಮಘಾ-ಈ ಎಂಟು ನಕ್ಷತ್ರಗಳಲ್ಲಿ ವರ ಅಥವಾ ಕನ್ಯೆಯ ಜನ್ಮ ನಕ್ಷತ್ರವಿದ್ದರೆ ನಾಡಿ ದೋಷ ಶಾಂತವಾಗುತ್ತದೆ ಎಂಬುದು ಕೆಲವು ಶಾಸ್ತ್ರಕಾರರ ಮತ.

[ಊ] ಭರಣಿ,ಮೃಗಶಿರಾ,ಶತಭಿಷ, ಹಸ್ತಾ ,ಪೂರ್ವಾಷಾಢ ಮತ್ತು ಆಶ್ಲೇಷ ನಕ್ಷತ್ರಗಳಲ್ಲಿ ಜನಿಸಿದರೂ ನಾಡಿ ದೋಷವಿರುವುದಿಲ್ಲವೆಂಬುದು ಕಾಲಾಮೃತಕಾರರ ಮತ.

  ಟಿಪ್ಪಣಿ:-ಈ ರೀತಿಯಾಗಿ ನಕ್ಷ್ತ್ರಗಳ ಆಧಾರದಿಂದ ಏಕನಾಡಿ ದೋಷವಿಲ್ಲವೆಂದು ಪರಿಗಣಿಸಲಾಗಿರುವ ಅಪವಾದಗಳ ಆಧಾರದಲ್ಲಿ ನಾಡಿ ಕೂಟವನ್ನು ಶುಭವೆಂದು ನಿರ್ಧರಿಸುವುದು ರೂಢಿಯಲ್ಲಿರುವ ನಿಯಮಗಳಿಗೆ ವಿರುಧ್ಧವಾಗಿರುವುದರಿಂದ ರೂಢಿಯಲ್ಲಿರುವ ನಿಯಮಗಳನ್ನು ಅನುಸರಿಸುವುದು ಉತ್ತಮವೆಂದು ಕೆಅವು ಶಾಸ್ತ್ರಕಾರರ ಅಭಿಮತವಾಗಿದೆ.

                ಸ್ತ್ರೀಪೂರ್ವ ನಕ್ಷತ್ರ ದೋಷಗಳಿಗೆ ಅಪವಾದಗಳು

 ೧ ಅಶ್ವಿನಿ,ಕೃತ್ತಿಕಾ,ರೋಹಿಣಿ,ಮೃಗಶಿರಾ, ಆರ್ದ್ರಾ,
ಮಘಾ, ಹಸ್ತ,ಸ್ವಾತಿ,ವಿಶಾಖಾ,ಮೂಲಾ, ಪೂರ್ವಾಷಾಢ,ಉತ್ತರಾಷಾಢ, ಶತಭಿಷಾ ಈನಕ್ಷತ್ರಗಳಲ್ಲಿ ಕನ್ಯೆಯದು ಪೂರ್ವ ಪಾದವಾಗಿ ವರನದು ಮುಂದಿನ ಪಾದವಾಗಿ ಇದ್ದರೂ ,ಕನ್ಯಾವರರ ರಾಶಿಗಳು ಒಂದೇ ಆಗಿದ್ದಲ್ಲಿ ಸ್ತ್ರೀಪೂರ್ವ ನಕ್ಷತ್ರ ದೋಷವಿಲ್ಲ.

 ೨ ಅಶ್ವಿನಿ,ಕೃತ್ತಿಕಾ, ರೋಹಿಣಿ,ಮೃಗಶಿರಾ,ಪುನರ್ವಸು, ಹಸ್ತಾ,ವಿಶಾಖಾ, ಅನುರಾಧ,ಮೂಲಾ,ಪೂರ್ವಾಷಾಢ, ಶತಭಿಷಾ ಇವುಗಳು ವರನ ಜನ್ಮ ನಕ್ಷತ್ರವಾಗಿದ್ದು, ಇವುಗಳ ಹಿಂದಿನ ನಕ್ಷತ್ರವು ಕನ್ಯೆಯ ಜನ್ಮ ನಕ್ಷತ್ರವಾಗಿದ್ದಲ್ಲಿ ಸ್ತ್ರೀ ಪೂರ್ವ ನಕ್ಷತ್ರ ದೋಷವಿರುವುದಿಲ್ಲ.

 ವರ್ಜ್ಯ ನಕ್ಷತ್ರಗಳು:-ಸ್ತ್ರೀ ಪೂರ್ವ ನಕ್ಷತ್ರಗಳಲ್ಲಿ ಕನ್ಯಾವರರ ನಕ್ಷತ್ರಗಳು ಬೇರೆ ಬೇರೆ ರಾಶಿಯಲ್ಲಿದ್ದರೂ ಸಹಾ ಭರಣಿ,ಆಶ್ಲೇಷಾ,ಹುಬ್ಬಾ[ಪೂರ್ವಾ ಫಲ್ಗುಣ],ಜ್ಯೇಷ್ಠಾ,ಧನಿಷ್ಠಾ,ಪೂರ್ವಾಭದ್ರ,ಉತ್ತರಾಭದ್ರ,ರೇವತಿ ಈ ನಕ್ಷತ್ರಗಳು ಕನ್ಯೆಯ ಜನ್ಮ ನಕ್ಷತ್ರಗಳಾಗಿದ್ದಲ್ಲಿ ಸರ್ವಥಾ ನಿಷಿಧ್ಧ ಎಂಬುದು ಅನೇಕ ಋಷಿಗಳ ಅಭಿಮತವಿದೆ.

  ಟಿಪ್ಪಣಿ:-ಸ್ತ್ರೀ ಪೂರ್ವ ನಕ್ಷತ್ರ ವಿಚಾರವು ಕನ್ಯಾವರರ ಜನ್ಮ ನಕ್ಷತ್ರಕ್ಕೆ ಮಾತ್ರಾ ಅನ್ವಯಿಸುತ್ತದೆಯೇ ಹೊರತು ನಾಮ ನಕ್ಷತ್ರಗಳಿಗಲ್ಲ.

॒॒॒॒॒॒॒॒॒॒॒॒॒॒॒॒॒॒॒॒॒॒॒॒॒॒॒॒॒॒॒॒॒॒॒॒॒॒॒॒॒॒॒॒॒॒॒॒॒॒॒॒॒॒॒॒॒॒॒॒॒॒॒॒॒॒
                                                               ಓಮ್ ಸ್ವಸ್ತಿ
“““““““““““““““““““““““““““““““““““““““““““““““““““““““““““““““'''''''''''''''''''''''''''''''''''''''''''''''''''''''''''''''''''''''''''''''''''''''''''
                                                                     ವಿಚಾರ-೪

                                         ನೀವು ಅದೃಷ್ಟ ಹರಳಿನ ಹಂಬಲದಲ್ಲಿರುವಿರಾ?
                                         *********************************
       ನೀವು ಅದೃಷ್ಟರತ್ನದ ಬಗ್ಗೆ ತಿಳಿಯಲಿಚ್ಚಿಸುವಿರಾ?. ಆಂಗ್ಲ ಪದ್ಧತಿಯಲ್ಲಿ ಜನವರಿ ಆದಿಯಾಗಿ ೧೨ ತಿಂಗಳುಗಳಿಗೆ ಪ್ರತ್ಯೇಕ ಪ್ರತ್ಯೇಕ ರತ್ನಗಳನ್ನು ಹೇಳಲಾಗುತ್ತಿದ್ದು ವ್ಯಕ್ತಿಯ ಜನ್ಮ ತಿಂಗಳಿಗೆ ರತ್ನವನ್ನು ಸೂಚಿಸುವ ವಿಧಾನವೊಂದಿದ್ದರೆ ವ್ಯಕ್ತಿಯ ಜನನ ದಿನಾಂಕದಂದು ಸೂರ್ಯನು ಇರುವ ರಾಶಿಗೆ ಸೂಚಿಸುವ ರತ್ನವನ್ನು ಹೇಳುವ ವಿಧಾನವೂ  ಇದೆ.
ಜನನದಿನಾಂಕದ ಆಧಾರದಲ್ಲಿ ಸೂರ್ಯನಿರುವ ರಾಶಿಯನ್ನು ನಿರ್ಧರಿಸುವ ಆಂಗ್ಲ ವಿಧಾನಕ್ಕೂ ಭಾರತೀಯ ವಿಧಾನಕ್ಕೂ ಗಣಿತ ಕ್ರಿಯೆಯಲ್ಲಿ ವ್ಯತ್ಯಾಸವಿದ್ದು ಕೆಲವು ದಿನಗಳ ವ್ಯತ್ಯಾಸ ಕಂಡುಬರುತ್ತಿದೆ. ಭಾರತೀಯ ಪದ್ಧತಿಯು ಆಂಗ್ಲ ವಿಧಾನವನ್ನು ಒಪ್ಪುತ್ತಿಲ್ಲ.ಮತ್ತು ಆಂಗ್ಲ ವಿಧಾನದ ಮೂಲಕ ನಿರ್ಧರಿಸಿದ ರತ್ನವನ್ನು ಧರಿಸುವುದರಿಂದ ಒಳಿತಾಗುವ ಬದಲು ಕೆಡುಕಾಗುವ ಸಂಭವಗಳೇ ಜಾಸ್ತಿ ಎಂದು ಪ್ರತಿಪಾದಿಸುತ್ತಿದೆ.
ಭಾರತೀಯ ಪದ್ದತಿಯಲ್ಲಿ ಜನ್ಮಲಗ್ನ ಆಧಾರಿತವಾಗಿ[೧]. ಜನ್ಮ ಕಾಲದಲ್ಲಿ ಚಂದ್ರನು ಯಾವ ರಾಶಿಯಲ್ಲಿರುತ್ತಾನೆಯೋ ಆ ರಾಶಿ ಆಧಾರಿತವಾಗಿ[೨]. ಜನನ ದಿನ ಸೂರ್ಯನು ಇರುವ ರಾಶಿಯ ಆಧಾರದಲ್ಲಿ ರತ್ನವನ್ನು ಸೂಚಿಸಲಾಗಿದೆ[೩]. ಯಾರಿಗೆ ಜನ್ಮ ಕುಂಡಲಿ ಇರುವುದೋ ಅವರಿಗೆ ಜನ್ಮ ಲಗ್ನ ಆಧಾರಿತವಾಗಿ, ಯಾರಿಗೆ ಜನ್ಮ ನಕ್ಷತ್ರವಾಗಲೀ, ಜನ್ಮ ಕುಂಡಲಿಯಾಗಲೀ ಇಲ್ಲದೆ ಕೇವಲ ಹುಟ್ಟಿದ ದಿನಾಂಕ ಮಾತ್ರಾ ತಿಳಿದಿರುವುದೋ ಅವರಿಗೆ ಆ ದಿನ ಸೂರ್ಯನು ಇರುವ ರಾಶಿಯ ಆಧಾರದಲ್ಲಿ ; ಯಾರಿಗೆ ಜನ್ಮ ,ಕುಂಡಲಿಯಾಗಲೀ ಜನ್ಮ ದಿನಾಂಕವಾಗಲೀ ಗೊತ್ತಿಲ್ಲದಿದ್ದು ಕೇವಲ ಜನ್ಮ ನಕ್ಷತ್ರ ತಿಳಿದಿದೆಯೋ ಅವರಿಗೆ ನಕ್ಷತ್ರ ಆಧಾರಿತವಾಗಿ ಚಂದ್ರ ರಾಶಿಯನ್ನು ನಿರ್ಧರಿಸಿ ಆ ರಾಶಿಯ ಆಧಾರದಲ್ಲಿ ಆಯಾ ರಾಶಿ ಲಗ್ನಗಳಿಗೆ ಸಂಬಂಧಿಸಿದ ರತ್ನವನ್ನು ಹೇಳುವುದಾಗಿದೆ. ಅನುಕ್ರಮವಾಗಿ ೧.೨,೩ ನೇ ಪದ್ಧತಿಗಳು ೧,೨,೩,ನೇ ಸ್ಥಾನದಲ್ಲಿ ಫಲವನ್ನು ಕೊಡುತ್ತವೆ ಎಂದು ಭಾರತೀಯ ಪದ್ಧತಿ ತಿಳಿಸುತ್ತದೆ.
      ಆದರೆ ಕುಂಡಲಿಯನ್ನು ಪರಿಶೋಧಿಸಿ ಆ ಕುಂಡಲಿಗೆ ಯಾವ ಗ್ರಹವು ಶುಭಕಾರವಾಗಿರುವುದೋ, ಯಾವ ಗ್ರಹವು ಯೋಗಕಾರಕ ಗ್ರಹವಾಗಿರುವುದೋ ಆ ಗ್ರಹಕ್ಕೆ ಸೂಚಿಸಿದ ಹರಳನ್ನು ಧರಿಸುವುದು ಉತ್ತಮ ವಿಧಾನವೆಂಬುದು ಈ ಲೇಖಕನ ಅಭಿಮತ.
ನವರತ್ನಗಳಲ್ಲಿ ಗ್ರಹಗಳಿಗಿರುವಂತೆಯೆ ಶತ್ರುತ್ವ ಮಿತ್ರತ್ವವಿದೆ.ಹಾಗಾಗಿ ಅವುಗಳನ್ನು ಧರಿಸಲು ಇಚ್ಚಿಸುವವರು ಇದರ ಬಗ್ಗೆ ತಿಳಿದು ಕೊಳ್ಳಬೇಕಾದ್ದು ಹಿತಕರ.ಇಲ್ಲವಾದಲ್ಲಿ ಶುಭ ಫಲದ ಅಪೇಕ್ಷೆಯಿಂದ ಧರಿಸಿದ ರತ್ನ ಅಶುಭಫಲಕ್ಕೆ ನಾಂಧಿಯಾಗಬಹುದು. ನವರತ್ನದ ಉಂಗುರಕ್ಕೆ ಈ ನಿಯಮ ಅನ್ವಯಿಸುವುದಿಲ್ಲ ಎನ್ನುತ್ತಾರೆ.
ರತ್ನದ ಆಭರಣಗಳನ್ನು ಮೊತ್ತ ಮೊದಲು ಧರಿಸಲು ನಿಯಮಗಳಿವೆ.ಶುಭ ಮುಹೂರ್ತದಲ್ಲಿ, ಶುಕ್ಲ ಪಕ್ಷದಲ್ಲಿ,ಆಯಾ ಗ್ರಹರಿಗೆ ಸೂಚಿಸಿದ ವಾರದಲ್ಲಿ,ಕುಲದೇವರ ಸನ್ನಿಧಾನದಲ್ಲಿ ಇರಿಸಿ ಪಂಚಗವ್ಯದಿಂದ ಶುದ್ಧೀಕರಿಸಿ, ಅದಕ್ಕೆ ಜಲಾಭಿಷೇಕ,ಕ್ಷೀರಾಭಿಷೇಕ,ಪುನಹ ಜಲಾಭಿಷೇಕ ಮಾಡಿ ನಂತರ ದೇವರಿಗೆ ನಿವೇದಿಸಿ ಪ್ರಸಾದ ರೂಪದಲ್ಲಿ ಸ್ವೀಕರಿಸಿ ಧರಿಸಬೆಕಾದುದು ನಿಯಮ.
ರತ್ನ ಖಚಿತ ಉಂಗುರವನ್ನು ಧರಿಸಲು ಕೂಡಾ ನಿಯಮಗಳಿವೆ.ಮೇಲೆ ತಿಳಿಸಿದಂತೆ ದೇವರಿಗೆ ನಿವೇದಿಸಿ ಸ್ವೀಕರಿಸಿದ ನಂತರ ಆಯಾ ಗ್ರಹಗಳಿಗೆ ಹೇಳಿರುವ, ಬಲ ಹಸ್ತದ ಬೆರಳಿಗೆ ಧರಿಸಬೇಕಾದುದು ಮುಖ್ಯ.ಸ್ತ್ರೀಯರಿಗೆ ಎಡ ಹಸ್ತದ ಬೆರಳನ್ನು ಹೇಳುವುದಿದೆ.  ಉಂಗುರ ಧರಿಸುವ ಬೆರಳಿಗೆ ಸಂಬಂಧಿಸಿದ ಗ್ರಹಕ್ಕೂ, ಆ ಬೆರಳ ಬುಡದಲ್ಲಿರುವ ಹಸ್ತ ಪರ್ವಗಳಿಗೆ ಸಂಭಂಧಿಸಿದ ಗ್ರಹಕ್ಕೂ ಮಿತ್ರತ್ವ ಅಥವಾ ಸಮ ಮಿತ್ರತ್ವ ಇರಬೇಕಾದುದು ಅತೀ ಮುಖ್ಯ..ಶತ್ರುತ್ವ ಅಥವಾ ಸಮ ಶತ್ರುತ್ವವಿದ್ದಲ್ಲಿ ಅಶುಭ ಫಲಗಳು ಕಟ್ಟಿಟ್ಟ ಬುತ್ತಿಯಾಗಬಹುದು.
ಧರಿಸಬೇಕಾದ ರತ್ನಕ್ಕೂ ತೂಕದ ನಿಯಮಗಳಿವೆ. ಪುರುಷರಿಗೆ ಸೂಚಿಸುವ ರತ್ನದ ತೂಕದ ೧/೨ ಅಂಶ ತೂಕದ ಹರಳನ್ನು ಸ್ತ್ರೀಯರಿಗೆ ಹೇಳಲಾಗಿದೆ.ಇನ್ನೂ ಒಂದು ಅಂಶವನ್ನು ಗಮನಿಸುವುದು ಒಳಿತು.ಪ್ರತಿಯೊಬ್ಬ ವ್ಯಕ್ತಿಗೂ ಒಂದು ಯೋಗಕಾರಕ ಗ್ರಹವಿರುತ್ತದೆ.ಆ ಯೋಗಕಾರಕ ಗ್ರಹಕ್ಕೆ ಹೇಳಲಾಗುವ ರತ್ನದ ಧಾರಣೆ ಶ್ರೇಷ್ಠ ಫಲವನ್ನು ಕೊಡಬಲ್ಲುದು.
               ಆತ್ಮೀಯ ಸಲಹೆ:-ರತ್ನದ ನೈಜ ಹರಳುಗಳಿಗೆ ದುಬಾರಿ ಬೆಲೆಯಿದೆ.ಒಂದು ವೇಳೆ ವ್ಯಕ್ತಿಗೆ ಸೂಚಿಸಲಾಗುವ ರತ್ನವು ಅನುಕೂಲಕರ ಫಲವನ್ನು ನೀಡದಿದ್ದಲ್ಲಿ ಆರ್ಥಿಕವಾಗಿ ಬಹಳ ಹಾನಿಗೊಳಗಾಗಬೇಕಾಗುತ್ತದೆ. ಪ್ರತಿಯೊಂದು ನೈಜ ರತ್ನಕ್ಕೆ ಬದಲಾಗಿ ಕಡಿಮೆ ದರದ ಉಪ ರತ್ನದ ಹರಳುಗಳು ದೊರಕುತ್ತವೆ. ೬ ತಿಂಗಳ ಕಾಲ ಕಡಿಮೆ ದರದ ಹರಳನ್ನು ಅಳವಡಿಸಿದ ಉಂಗುರವನ್ನಾಗಲೀ,ಆಭರಣವನ್ನಾಗಲೀ ಧರಿಸಿ ನಂತರ ನೈಜರತ್ನವನ್ನು ಕೊಂಡುಕೊಳ್ಳುವುದು ಹಿತಕರ. ಇದರಿಂದ ಆಗುವ ನಷ್ಟದ ಪ್ರಮಾಣ ಕಡಿಮೆ.

॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑॑
----------------------------------------------------------------------------------------------------------
            || ಓಮ್ ಸರ್ವೇಷಾಮ್ ಸ್ವಸ್ತಿರ್ಭವತ್ತ್ | ಶಾಂತಿರ್ಭವತ್ | ಪೂರ್ಣಂ ಭವತ್ | ಮಂಗಲಮ್ ಭವತ್ ||
                                                                          ||ಹರಿ:   ಓಮ್||
********************************************************************************







Wednesday 17 October 2012




                                ದೇವಾಲಯಗಳಿಗೊಂದು ಆಚಾರ ಸಂಹಿತೆ

                              ~~~~~~~~~~~~~~~~~~~~~~~~~~~~~~~
                                          [ಸಂಗ್ರಹಿಸಲ್ಪಟ್ಟ ಲೇಖನ]
                                 ++++++++++++++++++++++++++


 ದಕ್ಷಿಣದಲ್ಲಿ ಹಿಂದೂ ಮಹಾಸಾಗರ;ಉತ್ತರದಲ್ಲಿ ಹಿಮಾಲಯ ಪರ್ವತ ಶ್ರೇಣಿ;ಈ ಮಧ್ಯದಲ್ಲಿರುವ ಭವ್ಯ ಪುರಾತನ ಸಂಸ್ಕೃತಿಯ ತಪೋಭೂಮಿ ಭಾರತ. ಸಹಸ್ರಾರು ಯೋಜನ ಪರ್ಯಂತ ಹಬ್ಬಿರುವ ಧರ್ಮ ಪ್ರಧಾನ ಪುಣ್ಯ ನಾಡಿದು ಭಾರತ. ದಾನ,ಯಜ್ಞ, ತಪಾರಾಧನೆ, ವಿಶ್ವಕ್ಕೆ ಭಾರತದ ಮಹಾನ್ ಕೊಡುಗೆ.ಇದರಿಂದಾಗಿ ಸ್ವರ್ಗ ಸದೃಶ ಮಹಾಪುಣ್ಯ ಭೂಮಿ ನಮ್ಮ ಈ ಭಾರತ. ಪುರಾಣಜ್ಞರು ನಿರೂಪಿಸಿದಂತೆ "ದೇಶೋಯಂ ಭಾರತಂ ವರ್ಷಂ ಭೂರೇಷಾ ಕರ್ಮಿಣಾಂನೃಣಾಮ್ |ಯೋಜನಾದಿ ಸಹಸ್ರಾಣಿ ವಿಸ್ತಾರೇಚೈವ ಕಥ್ಯತೇ||" ಎಂಬುದು ಚಿರ ನೂತನ ಸತ್ಯ. ಹೌದು; ಕಾಯಕಕ್ಕೆ ಪ್ರಾಧಾನ್ಯ ನೀಡಿ ಅದರ ಫಲವನ್ನು ಅನುಭವಿಸುವುದು ಈ ನಾಡಿನ ವೈಶಿಷ್ಟ್ಯ. "ಶ್ರೇಷ್ಟ ತದ್ಭಾರತಂ ವರ್ಷಂ ಸರ್ವ ವರ್ಷೇಷು ಸಮ್ಮತಂ| ಫಲಾರ್ಥಿನ: ಕಾಮಯಂತೇ ಕರ್ಮ ಭೂಷುಜ ನಿಂಬುದಾ||" ಎಂದು ಪದ್ಮ ಪುರಾಣದಲ್ಲಿ ಹೇಳಿದೆ.

          ಇಂತಹಾ ದಿವ್ಯ-ಭವ್ಯತೆಯ ಪುಣ್ಯನಾಡಿನಲ್ಲಿ ಜನಿಸಿ ತಮ್ಮ ಉದಾತ್ತ ಕರ್ಮಗಳಿಂದ  ಆದರ್ಶನೀಯರಾದ ಪೂಜ್ಯ ಋಷಿ-ಮುನಿ,ಸಿಧ್ಧ-ಸಾಧ್ಯ ಮಹಾನ್ ಶ್ರೇಷ್ಟರು ತಮ್ಮ ಮುಂದಿನ ಜನಾಂಗದ ಧಾರ್ಮಿಕ ಒಳಿತಿಗಾಗಿ ಮತ್ತು ಉನ್ನತಿಗಾಗಿ ಕಂಡುಕೊಡ ಮಾರ್ಗ ಆರಾಧನಾ ಮಾರ್ಗ. ಕುಲಪರಂಪರೆಯತೆ ಆರಾಧಿಸಲು ಮನೆಗಳಲ್ಲಿ ಪೂಜಾಗೃಹಗಳನ್ನು ರೂಪಿಸಿಕೊಳ್ಳಲು ಮೇಲ್ಪಂಕ್ತಿ ಹಾಕಿ, ಸಾಮಾಜಿಕ ಐಕ್ಯತೆಯ ರಕ್ಷಣೆಗಾಗಿ ಊರ ಕೇಂದ್ರದ ಪ್ರಶಸ್ತ ಸ್ಥಳದಲ್ಲಿ ದೇವಾಲಯಗಳನ್ನು ನಿರ್ಮಿಸಿ ಅಲ್ಲಿ ಆರಾಧನಾ ವಿಧಿ-ವಿಧಾನಗಳನ್ನು ರೂಪಿಸಿ ಊರಿನ ಸಮಸ್ತ ಆಸ್ತಿಕ ಭಕ್ತಾದಿಗಳನ್ನು ಅನುಗ್ರಹಿಸಲು ದೇವತಾ ಸಾನಿಧ್ಯವನ್ನು ಪ್ರತಿಷ್ಟಾಪಿಸಿದರು.ಅಂತಹಾ ಅನೇಕಾನೇಕ ದೇವಾಲಯಗಳ ನೆಲೆವೀಡು ನಮ್ಮೀ ಪಾವನ ಭಾರತನಾಡು.

          ಈ ರೀತಿ ಉದಿಸಿದ ದೇವಾಲಯಗಳು ನಮ್ಮ ಭವ್ಯ ಹಿಂದೂ ಸಂಸ್ಕೃತಿಯಲ್ಲಿ ಆರಾಧನಾ ಪ್ರತೀಕವಾಗಿ ಮಹತ್ತರ ಪಾತ್ರ ವಹಿಸುವ ಕೇಂದ್ರ ಬಿಂದುಗಳು.ಪ್ರಕೃತಿಯನ್ನು ತಾಯಿಯಾಗಿಯೂ,ಪರಮಾತ್ಮನನ್ನು ತಂದೆಯಾಗಿಯೂ ಕಲ್ಪಿಸಿಕೊಂಡ ಪುರಾತನ ಶ್ರೇಷ್ಟರು ಇವರೀರ್ವರ ಮಿಲನ ಕ್ಷೇತ್ರವಾಗಿಯೂ ದೇವಾಲಯಗಳನ್ನು ಗುರುತಿಸಿದರು.ದೇವಾಲಯವು ಅಮೃತ ಕಲಶ.ಆದರೆ ಕಲಶವೇ ಅಮೃತವಲ್ಲ.ಅಮೃತ ತುಂಬಿರುವುದರಿಂದ ಕಲಶಕ್ಕೆ ಮಹತ್ವ. ತಾವು ಶ್ರಮಿಸಿ ಮುಂದೆ ತನ್ನ ಸಂತತಿಗಾಗಿರಲಿ, ಅದರಿಂದ ಆ ಸಂತತಿ ಸುಖವಾಗಿ ಚಿರಕಾಲ ಅವಿಛ್ಛಿನ್ನವಾಗಿ ಬೆಳೆದು ಬಾಳಲಿ ಎಂಬ ದೂರ ದೃಷ್ಟಿಯಿಂದ ಹಿರಿಯರು ಸಂಪತ್ತು ಶೇಖರಿಸಿ ಇಟ್ಟಿರುವ ನಿದರ್ಶನ ನಾವು ಕಾಣಬಹುದಾಗಿದೆ.ಅದೇ ರೀತಿ ನಮ್ಮ ಪೂರ್ವಜರಾದ ಋಷಿ,ಮುನಿ,ಸಿಧ್ಧ-ಸಾಧ್ಯರು ತಮ್ಮ ದೈವೀಸಂಪತ್ತನ್ನು ಮುಂದಿನ ಜನಾಂಗಕ್ಕೆ ಶೇಖರಿಸಿ ಇಟ್ಟಿರುವ ಜಾಗವೇ ದೇವಾಲಯಗಳು.

         ಆಲಯವೊಂದು ಪರಿಪೂರ್ಣವೆನಿಸಲು ಪ್ರಶಸ್ತವಾದ ಭೂಮಿ, ಅದರ ಮೇಲೆ ಭದ್ರವಾದ ಅಡಿಪಾಯ , ಆ  ಅಡಿಪಾಯದ ಮೇಲೆ ಗೋಡೆ,ಆ ಗೋಡೆಗಳನ್ನಾಧರಿಸಿ ಮಾಡು ಇರುವಂತೆ ದೇವ ಸಾನ್ನಿಧ್ಯವಿರಬೇಕಾದ ದೇವಾಲಯಗಳಿಗೆ ನಂಬಿ ಆರಾಧಿಸುವ ಭಕ್ತಜನಸಮೂಹ,ನಿಸ್ವಾರ್ಥತಾ ಮನೋಭಾವನೆಯ ಧರ್ಮದರ್ಶಿ[ಆಢಳಿತ]ಮಂಡಳಿ,ಶಾಸ್ತ್ರವೇತ್ತ ಅರ್ಚಕ-ತಂತ್ರಿವರೇಣ್ಯರು ಇರಬೇಕು.ಇವರೆಲ್ಲರ ತ್ಯಾಗ ಮನೋಭಾವದ ಪ್ರತೀಕವಾಗಿ ದೇವತಾ ಸಾನ್ನಿಧ್ಯ ಶಕ್ತಿ ವೃಧ್ಧಿಯಾಗಿ ಬೆಳಗುತ್ತದೆ. ಪ್ರತಿಯೊಂದು ಮನೆಗೆ ಮನೆಯವರದ್ದೇ ಆದ ರೀತಿ,ರಿವಾಜು,ಕಟ್ಟುಪಾಡು[ನೀತಿ ಸಂಹಿತೆ] ಇರುವಂತೆ ದೇವಾಲಯಗಳಿಗೂ ಪ್ರಾಚೀನ ಪರಂಪರೆಯಿಂದ ಆಚರಿಸಿಕೊಂಡು ಬಂದ ರೀತಿ,ರಿವಾಜು,ಕಟ್ಟುಪಾಡು[ನೀತಿಸಂಹಿತೆ]ಗಳಿವೆ.ದೇವಾಲಯಗಳು ಅಸ್ಥಿತ್ವಕ್ಕೆ ಬರುವಾಗಲೇ ಅವುಗಳನ್ನು ಸ್ಥಾಪಿಸಿ ಲೋಕಾರ್ಪಣ ಮಾಡಿದ ಮಹಾತ್ಮರು ರೂಪಿಸಿ ಜ್ಯಾರಿಗೊಳಿಸಿದ ಅಂತಹಾ ರೀತಿ,ರಿವಾಜು,ಕಟ್ಟುಪಾಡು[ನೀತಿ ಸಂಹಿತೆ]ಗಳು ಅವಿಛ್ಛಿನ್ನವಾಗಿ ಸಾಗಿ ಬಂದಿವೆ ಎಂದರೆ ತಪ್ಪಾಗಲಾರದು. ನಾವು ಬೇರೆಯವರ ಮನೆಗೆ ಹೋದಾಗ ಆ ಮನೆಯವರ ಕಟ್ಟುಪಾಡುಗಳನ್ನು ಗೌರವಿಸಬೇಕಾದುದು ಎಷ್ಟು ಮುಖ್ಯವೋ ಅದೇ ರೀತಿ ದೇವಾಲಯಗಳಿಗೆ ಸಂಬಂಧಪಟ್ಟಂತೆ ,ಆ  ದೇವಾಲಯದಲ್ಲಿ ದೇವತಾ ಸಾನ್ನಿಧ್ಯವನ್ನು ಕಲ್ಪಿಸಿ.ಸಾನಿಧ್ಯ ಶಕ್ತಿಯನ್ನು ವೃಧ್ಧಿಗೊಳಿಸಿ ಆರಾಧಿದ ಸಂಸ್ಥಾಪಕ ಶ್ರೇಷ್ಟರು ಮುಂದಿನ ಜನಾಂಗಕ್ಕಾಗಿ, ಜನಾಂಗದ ಶ್ರೇಯೋಭಿವೃಧ್ಧಿಗಾಗಿ ರೂಪಿಸಿದ್ದಂತಹಾ, ತಲತಲಾಂತರಗಳಿಂದ ಆಚರಿಸಿಕೊಂಡುಬಂದಂತಹಾ ಕಟ್ಟುಪಾಡು,ರೀತಿ,ರಿವಾಜುಗಳನ್ನು[ನೀತಿಸಂಹಿತೆಯನ್ನು]ಭಕ್ತಜನಮಾನ್ಯರು,ಧರ್ಮದರ್ಶಿ[ಆಢಳಿತ] ಮಂಡಳಿ,ಅರ್ಚಕತಂತ್ರಿವರೇಣ್ಯರು,ಪರಿಚಾರಕ ವರ್ಗದವರು ಕರ್ತವ್ಯಸಂಹಿತೆಯೊಂದಿಗೆ ಪರಿಪಾಲನೆ ಮಾಡುವುದರಿಂದ ಆ ದೇವಾಲಯದಲ್ಲಿ ದೇವತಾ ಸಾನ್ನಿಧ್ಯ ವೃಧ್ಧಿಯಾಗಿ ಲೋಕಹಿತ ಸಾಧ್ಯವಾಗಬಹುದಾಗಿದೆ.ಯಾವುದಾದರೊಂದು ಮನೆಯವರ ರೀತಿ-ನೀತಿ;ರಿವಾಜು-ಕಟ್ಟುಪಾಡುಗಳನ್ನು ಗೌರವಿಸಿ ಪಾಲಿಸಲು ನಮಗೆ ಅಸಾಧ್ಯವೆಂದಾದಲ್ಲಿ ಆ ಮನೆಯವರ ಸಂಪರ್ಕದಿಂದ ನಾವು ದೂರವುಳಿಯುವಂತೆ ದೇವಾಲಯಗಳಲ್ಲಿ ತಲತಲಾಂತರಗಳಿಂದ ಪಾಲಿಸಿಸುತ್ತಾ ಅವಿಛ್ಛಿನ್ನವಾಗಿ ಸಾಗಿ ಬಂದಿರುವಂತಹಾ ಕಟ್ಟುಪಾಡುಗಳು ನಮಗೆ ಸಹನೀಯವಲ್ಲವಾದಲ್ಲಿ ನಾವು ಅಂತಹ ದೇವಾಲಯಗಳಿಂದ ದೂರವಿರುವುದು ಭೂಷಣವೆನಿಸುವುದು ಎಂಬುದು ಈ ಸಂಗ್ರಾಹನ ಅಭಿಮತ. ಇತ್ತೀಚೆಗಿನ ದಿನಗಳಲ್ಲಿ ಕೆಲವು ಮಾಧ್ಯಮಗಳಲ್ಲಿ,ಸಾರ್ವಜನಿಕ ವೇದಿಕೆಗಳಲ್ಲಿ,ಅಂತರ್ಜಾಲ ಮಾಧ್ಯಮಗಳಲ್ಲಿ ದೇವಾಲಯಗಳ ಪದ್ದತಿಗಳ ಕುರಿತಾಗಿ ಬಂದಿರುವ ಟೀಕೆ,ಟಿಪ್ಪಣಿಗಳ ಕುರಿತಾಗಿ ಈ ವಿಚಾರವನ್ನು ಇಲ್ಲಿ ಉಲ್ಲೇಖಿಸಬೇಕಾಯಿತು. ವಿಷಯಾಂತರಕ್ಕೆ ಕ್ಷಮೆಯಿರಲಿ.

        ಪ್ರಸ್ತುತ ಎಲ್ಲಾ ದೇವಾಲಯಗಳಿಗೆ ಅನ್ವಯಿಸುವಂತಹ ಕರ್ತವ್ಯ ಹಾಗೂ ನೀತಿಸಂಹಿತೆಯನ್ನು ಅರಿತುಕೊಳ್ಳುವ ಬಯಕೆಯ ಪೂರೈಕೆಯೇ ಈ ಸಂಗ್ರಹಕಾರನ ಉದ್ದೇಶ. ಕೆಲವೊಂದು ದೇವಾಲಯಗಳಲ್ಲಿ ಆಯಾ ದೇವಾಲಯಗಳ ಸಂಸ್ಥಾಪಕಶ್ರೇಷ್ಟರ ಆಶಯಕ್ಕನುಗುಣವಾದ ಪ್ರತ್ಯೇಕ ಕೆಲವು ಕಟ್ಟುಪಾಡುಗಳಿರಬಹುದಾದರೂ ಇಲ್ಲಿ ಸಂಗ್ರಹಿಸಲ್ಪಟ್ಟಿರುವ ವಿಚಾರಗಳು ಎಲ್ಲಾ ದೇವಾಲಯಗಳಿಗೂ ಶಾಸ್ತ್ರಕಾರರು ನಿರೂಪಿಸಿದ ನೀತಿಸಂಹಿತೆಯಾಗಿದೆ.ದೇವತಾ ಸಾನ್ನಿಧ್ಯವೃಧ್ಧಿಗೆ ಕಾರಣೀಭೂತವಾಗುವಂತಹಾ ಈ ನೀತಿಸಂಹಿತೆಯ ಪರಿಪಾಲನೆಯಿಂದ ಲೋಕಹಿತವಾಗಬಲ್ಲುದೆಂದು ಅಗಮ ಶಾಸ್ತ್ರಕಾರರು ಸಾರಿದ್ದಾರೆ. ಯಾವುದೇ ದೇವಾಲಯದಗರ್ಭಗುಡಿಯನ್ನು ಪ್ರದಕ್ಷಿಸಿದ ಮಾತ್ರದಲ್ಲಿ ಮೂಲತ:ಆ ದೇವಾಲಯ ಯಾವ ವರ್ಗದವರಿಂದ ಸೃಷ್ಟಿಸಲ್ಪಟ್ಟು ದೇವತಾಪ್ರತಿಷ್ಠೆ ಜರಗಿಸಲ್ಪಟ್ಟಿದೆ ಎಂಬುದು ಅರಿವಾಗುವಂತೆ ಅದರ ರಚನೆಯಿರುತ್ತದೆ.ಅವರ ಆಶಯಗಳಿಗುಣವಾದ ಆಚಾರಸಂಹಿತೆ ಆ ದೇವಾಲಯದಲ್ಲಿ ಪಾಲಿಸಲ್ಪಡುತ್ತದೆ."ಸೋಮಸೂತ್ರ"ಲಕ್ಷಣದ ಮುಖೇನ ಶಾಸ್ತ್ರಕಾರರು ನಿರೂಪಿಸಿದಂತೆ "ಬ್ರಾಹ್ಮಣವರ್ಗ"ದವರಿಂದ ಪ್ರತಿಷ್ಠಾಪಿಸಲ್ಪಟ್ಟಿದ್ದಲ್ಲಿ "ಗೋ ಮುಖ"ಸೋಮಸೂತ್ರವೂ, "ಕ್ಷತ್ರಿಯ"ವರ್ಗದವರಿಂದ ಪ್ರತಿಷ್ಠಾಪಿಸಲ್ಪಟ್ಟಿದ್ದಲ್ಲಿ "ಸಿಂಹಮುಖ"ದ ಸೋಮಸೂತ್ರವೂ,"ವೈಶ್ಯವರ್ಗ"ದವರಿಂದ ಪ್ರತಿಷ್ಠಾಪಿಸಲ್ಪಟ್ಟಿದ್ದಲ್ಲಿ "ಗಜಮುಖ"ದ ಸೋಮಸೂತ್ರವೂ,"ಶೂದ್ರವರ್ಗ"ದವರಿಂದ ಪ್ರತಿಷ್ಠಾಪಿಸಲ್ಪಟ್ಟಿದ್ದಲ್ಲಿ ಮೊಸಳೆ ಮುಖದ "ಸೋಮಸೂತ್ರ"ವೂ ಇರಬೇಕಾಗಿದೆ. ಆಗಮಶಾಸ್ತ್ರಕಾರು ದೇವಾಲಯಗಳಲ್ಲಿ ಯಾರ‍್ಯಾರು ಹೇಗಿರಬೇಕು,ಅವರ ಕರ್ತವ್ಯಗಳೇನು,ಪದ್ದತಿಗಳೇನು ಎಂಬುದನ್ನು ಗ್ರಂಥಗಳಲ್ಲಿ ವಿಸ್ತಾರವಾಗಿ  ತಿಳಿಸಿದ್ದು ಅವುಗಳಲ್ಲಿ ಪ್ರಾಮುಖ್ಯವೆನಿಸಿದ್ದನ್ನು ಆಯ್ದು ಇಲ್ಲಿ ನಿರೂಪಿಸುತ್ತಿದ್ದೇನೆ.

        ಕುಟುಂಬಕ್ಕೋರ್ವ ಪುರೋಹಿತರಿದ್ದಂತೆ ದೇವಾಲಯಗಳಲ್ಲಿ ತಂತ್ರಿವರೇಣ್ಯರದ್ದು ಪ್ರಧಾನ ಪಾತ್ರ. ದೇವತಾ ಸಾನ್ನಿಧ್ಯ ಪ್ರತಿಷ್ಠಾ ಮಹಾಕಾರ್ಯ ಇವರ ಹೊಣೆಗಾರಿಕೆ.ಪುರಾತನ ಕಾಲದಿಂದ ಪಾಲಿಸಿಕೊಂಡು ಬಂದ ಆಲಯಪದ್ದತಿಗೆ ವ್ಯತ್ಯಸ್ತವಾಗದಂತೆ ನಡೆದುಕೊಳ್ಳಲು ಭಕ್ತರಿಗೆ,ಧರ್ಮದರ್ಶಿಮಂಡಳಿಗೆ,ಅರ್ಚಕರಾದಿಯಾಗಿ ಪರಿಚಾರಕ ಭೃತ್ಯವರ್ಗಕ್ಕೆ ಎಚ್ಚರಿಕೆ ನೀಡುವುದರ ಮುಖೇನ ದೇವತಾ ಸಾನ್ನಿಧ್ಯಶಕ್ತಿಯ ವಿಕಸನಕ್ಕೆ ಇವರು ಮಾರ್ಗದರ್ಶಕರಾಗಿರುತ್ತಾರೆ.ಇವರುಗಳ ಕರ್ತವ್ಯದ ಬಗ್ಗೆ "ತಂತ್ರಸಮುಚ್ಚಯ"ದಲ್ಲಿ ವಿವರವಾಗಿ ತಿಳಿಸಲ್ಪಟ್ಟಿದ್ದು ಅದರ ಸಾರಾಂಶ ಹೀಗಿದೆ.

        ದೇವತಾಪ್ರತಿಷ್ಠಾ ಕರ್ತರಾದ ತಂತ್ರಿಗಳು ಕೂರ್ಮಾಸನದಲ್ಲಿ ಸುಖಾಸೀನರಾಗಿ ಆತ್ಮಪೂಜಾದಿವಿಧಿಗಳನ್ನು ಪೂರೈಸಿ,ಗುರು ಗಣಪತಿಯರಿಗೆ ವಂದಿಸಿ,ಬ್ರಾಹ್ಮಣಶ್ರೇಷ್ಠರುಗಳನ್ನು ಗೊ,ವಸ್ತ್ರಾದಿ ಸುವರ್ಣ ದಾನಗಳಿಂದ ತೃಪ್ತಿಪಡಿಸಿ ದೈವಜ್ಞರುಗಳಿಂದ ನಿಗದಿ ಪಡಿಸಲ್ಪಟ್ಟಿರುವ ದೋಷವಿರಹಿತವಾಗಿರುವ ಶ್ರೇಷ್ಠ ಲಗ್ನಾಂಶದಲ್ಲಿ ದೇವತಾ ಸಾನ್ನಿಧ್ಯವನ್ನು ಪ್ರತಿಷ್ಠಾಪಿಸಬೇಕು.ಆ ಮೇಲೆ ಪ್ರತಿಷ್ಠಾ ಬ್ರಹ್ಮಕಲಶಾದಿ ಅಭಿಷೇಕಾನಂತರದೇವರ ನಿತ್ಯ ನೈಮಿತ್ತಿಕಾದಿ ಉತ್ಸವಗಳನ್ನು ಘೋಷಣೆ ಮಾಡಬೇಕು.ನಂತರ ಪ್ರತಿವರ್ಷ ಈ ಉತ್ಸವಾದಿಗಳನ್ನು ದೇವಾಲಯದಲ್ಲಿ ಆಚರಿಸುವ ವ್ಯವಸ್ಥೆಮಾಡಬೇಕು.ಪರ್ವದಿನಾದಿಗಳನ್ನು,ನಿತ್ಯ ಆರಾಧನಾ ಕಾರ್ಯಗಳನ್ನು ವಿಧಿವತ್ತಾಗಿ ನಡೆಯಿಸಿಕೊಂಡುಬರಲು ಧರ್ಮದರ್ಶಿ ಮಂಡಳಿಗೆ,ಅರ್ಚಕರಿಗೆ ಮಾರ್ಗದರ್ಶನ ನೀಡಬೇಕು. ನಂತರ ಪ್ರಾಚೀನ ಕಾಲದಿಂದಲೂ ದೇವಾಲಯದಲ್ಲಿ ಪಾಲಿಸಿಕೊಂಡುಬಂದ ರೀತಿ,ರಿವಾಜು,ಕಟ್ಟುಪಾಡುಗಳನ್ನು ಭಕ್ತಜನಮಾನ್ಯರುಗಳು ಪಾಲಿಸಿಕೊಂಡು ಬರಲು ನಿರ್ದೇಶನ ನೀಡಬೇಕು. ಈ ವ್ಯವಸ್ಥೆಯನ್ನು ಮಾಡುವುದರಿಂದ ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಲ್ಪಟ್ಟ ಪರಮಾತ್ಮನು ಸಂತೃಪ್ತಿಹೊಂದಿ ಸಂಪತ್ಪ್ರದನಾಗಿ ಅನುಗ್ರಹಿಸುವಂತಾಗುವನು.ತನ್ನ ಭಕ್ತರನ್ನು ಅನುಗ್ರಹಿಸಲೋಸುಗವಾಗಿಯೇ "ಅಜ್ಞಾನಿನಾಂ ಭಾವನಾರ್ಥಾಯ ಪ್ರತಿಮಾ ಪರಿಕಲ್ಪಿತಾ:"ಎಂಬುದನ್ನು ಭಕ್ತಜನಸಮೂಹಕ್ಕೆ ಅರಿವು ಮೂಡಿಸುವ ಮಹಾನ್ ಕಾರ್ಯ ತಂತ್ರಿವರೇಣ್ಯರದ್ದು. ತಂತ್ರಿಗಳ ಮುಖೇನ ವಿಗ್ರಹದಲ್ಲಿ ತನ್ನ ಮಹಾ ಸನ್ನಿಧಾನವನ್ನು ಹೊಂದಿ ದೇವರು ಭಕ್ತಜನಸಮೂಹದ ಆರಾಧನಾಶಕ್ತಿ ಮುಖಾಂತರಸಾನ್ನಿಧ್ಯ ಶಕ್ತಿಯನ್ನು ವೃಧ್ಧಿಸಿಕೊಂಡು ಶರಣಾಗತಸಮೂಹಕ್ಕೆ ಶ್ರೇಯಸ್ಸನ್ನು ಕರುಣಿಸಬಹುದಾಗಿದೆ.ದೇವತಾ ಸಾನ್ನಿಧ್ಯಕ್ಕೆ ಚ್ಯುತಿ ಬರುವ ಅಪಚಾರಗಳೇನಾದರೂಭಕ್ತರಿಂದಾಗಲೀ,ಅರ್ಚಕರಿಂದಾಗಲೀ,ಆಢಳಿತ,ಪರಿಚಾರಕ.ಭರ್ತ್ಯರಿಂದಾಗಲೀ, ಚೋರರಿಂದಾಗಲೀ ಸಂಭವಿಸಿದ್ದರೆ ಅದನ್ನು ತಿಳಿದು ಪ್ರಾಯಶ್ಚಿತ್ತ ಕರ್ಮಾದಿಗಳಿಂದದೋಷಗಳನ್ನು ದೂರಗೊಳಿಸಿ, ತನ್ಮೂಲಕ ದೇವತಾ ಸಾನ್ನಿಧ್ಯಶಕ್ತಿಯನ್ನು ವೃಧ್ಧಿಗೊಳಿಸಿ,ಅರ್ಚಕರಿಗೂ,ಆಢಳಿತದವರಿಗೂ,ಭಕ್ತಜನ ಸಮೂಹಕಕ್ಕೂ,ಪರಿಚಾರಕ ಭೃತ್ಯವರ್ಗಕ್ಕೂ ಆಚಾರದ ಬಗ್ಗೆ ತಿಳಿ ಹೇಳುವುದು ತಂತ್ರಸಮುಚ್ಚಯದಲ್ಲಿ ನಿರೂಪಿಸಲ್ಪಟ್ಟಂತೆ ತಂತ್ರಿವರೇಣ್ಯರುಗಳ ಕರ್ತವ್ಯಗಳ ಸಾರಾಂಶ.

         ಈ ರೀತಿಯಾಗಿ ತಂತ್ರಿವರೇಣ್ಯರಿಂದ ಬಿಂಬದಲ್ಲಿ ಪ್ರತಿಷ್ಠಾಪಿಸಲ್ಪಟ್ಟ ಸಾನ್ನಿಧ್ಯ ಶಕ್ತಿಯನ್ನು ಅರ್ಚನಾದಿ ವಿಧಿಮುಖೇನ ವೃಧ್ಧಿಗೊಳಿಸಿ ಭಕ್ತಜನ ಸಮೂಹಕ್ಕೆ ಇಷ್ಟಾರ್ಥದಾಯಕನ  ಅನುಗ್ರಹ ದೊರಕಿಸಿ ಕೊಡುವ ಕರ್ತವ್ಯ  ಅರ್ಚಕರದು.ವಿವಿಧ ಶಾಸ್ತಕಾರರುಗಳಿಂದ,ರೂಪಿಸಲ್ಪಟ್ಟ
ವೈಖಾನಸ,ಪಾಂಚರಾತ್ರಗಳೇ ಮೊದಲಾದ ಆಗಮ ಗ್ರಂಥಗಳಲ್ಲಿ
 ಆಲಯಗಳ ಅರ್ಚಕರ ಕರ್ತವ್ಯ ವಿಧಿಗಳ ಬಗ್ಗೆ ವಿಸ್ತಾರವಾಗಿ ಹೇಳಲ್ಪಟ್ಟಿದೆ.ಇವುಗಳಲ್ಲಿ ಹೇಳಿರುವ ಮುಖ್ಯವಿಚಾರಗಳನ್ನು ಮಾತ್ರಾ ಇಲ್ಲಿ ನಿರೂಪಿಸಬಯಸುತ್ತೇನೆ. "ಅರ್ಚಕಸ್ಯ ಹರಿ: ಸಾಕ್ಷಾತ್ ಚರ ರೂಪೇ ನ: ಸಂಶಯ:" ಅಂಂದರೆ ಅರ್ಚಕನು ಸ್ವಯಂ ಭಗವಾನನಾಗಿ ಅಹಂ ಬ್ರಹ್ಮಾಸ್ಮಿ ಎಂಬ ತಾದಾತ್ಮ್ಯ ಭಾವದಿಂದ ಆರಾಧನಾಕರ್ಮವನ್ನು ನಿರ್ವಹಿಸಿದಲ್ಲಿ ಅಂತಹ ಅರ್ಚಕರುಗಳನ್ನು ಹೊಂದಿರುವ ದೇವಾಲಯಗಳು ನೆಲೆಸಿರುವ ನಾಡು ಧನ್ಯವೆನಿಸುತ್ತದೆ ಎನ್ನುತ್ತವೆ ಶಾಸ್ತ್ರಗಳು."ಬ್ರಾಹ್ಮಣಂ ಯೋನಿಜಂ ಶುಧ್ಧಂ ನಿಯತ ಬ್ರಹ್ಮವಾದಿನಾಂ|ವಿನಯಾದಿ ಗುಣೈರ್ಯುಕ್ತ: ಧರ್ಮ ಶೃತಿ ಪರಾಯಣ:||"" ಎಂಬುದಾಗಿ ಅನಿರುಧ್ಧ ಸಂಹಿತೆಯ ಆಧ್ಯಾಯ ೨ ರ ೧೨ ನೇ ಶ್ಲೋಕ ಹೇಳುತ್ತಿದೆ. "ಆದೌತ್ ಬ್ರಾಹ್ಮಣೋ ವಿದ್ವಾನ್ ಪಾಂಚರಾತ್ರ ಪರಾಯಣ:|ಗೃಹಸ್ಥೋ ಬ್ರಹ್ಮಚಾರೀಚ ವಾನಪ್ರಸ್ಥೋಥವಾಭವೇತ್||"ಎಂಬುದಾಗಿ ಪದ್ಮ ಸಂಹಿತೆಯಲ್ಲಿ ಅರ್ಚನಾಧಿಕಾರಿಯ ಬಗ್ಗೆ ಹೇಳಿದೆ.ಹೆಚ್ಚಿನ ಎಲ್ಲಾ ಆಗಮ ಸಂಹಿತೆಗಳಲ್ಲಿ ಅರ್ಚಕರ ಬಗ್ಗೆ " ಆತನು ಶಮ-ದಮ-ಶಾಂತನಿದ್ದು ಜಿತೇಂದ್ರಿಯನಾಗಿ ಧರ್ಮನಿರತನಿರಬೇಕು.ದಾನಿಯೂ,ಕರ್ಮನಿಷ್ಟನೂ ಆಗಿರುವುದರೊಂದಿಗೆ ಮಧುರ ಭಾಷಿಕನಾಗಿ,ಯೋಗ್ಯ ನಡೆ-ನುಡಿಯುಳ್ಳವನಾಗಿ,ವೇದವೇದಾಂಗಾದಿ ಸರ್ವ ಶಾಸ್ತ್ರ ಸಂಪನ್ನನಿರಬೇಕು.ಅಧ್ಯಯನ,ಅಧ್ಯಾಪನ,ಲೌಕಿಕ,ವೈದಿಕಶಾಸ್ತ್ರಗಳ ಅನುಭವಿಯೂ,ನಿರಹಂಕಾರಿಯೂ ಆಗಿರಬೇಕು.ಅಗ್ನಿಹೋತ್ರಿಯೂ,ಕುಶಾಗ್ರಮತಿಯೂ,ಸತ್ಯಸಂಪನ್ನನೂ,ದೀಕ್ಷಿತನೂ ಆಗಿದ್ದು ಸಂಗೀತ,ಸಾಹಿತ್ಯ,ಜ್ಯೋತಿಷ್ಯ ಇತ್ಯಾದಿ ಶಾಸ್ತ್ರಗಳಲ್ಲಿ ಪರಿಣತನಾಗಿರಬೇಕು. "ಆತ್ಮಾನಾಂ ಕಿಂಕರತ್ವೇನ ದೇವಾಯ ವಿನಿವೇದಯೇತ್"ಎಂಬಂತೆ ಶೋಭಿಸುತ್ತಿರಬೇಕು ಎಂದುಹೇಳಿದೆ.ಸಂಕ್ಷಿಪ್ತವಾಗಿ ಹೇಳುವುದಾದರೆ "ತದ್ಭ್ರುತ್ಯ ಭೃತ್ಯ ಪರಿಚಾರಿಕ ಭ್ರೃತ್ಯ ಭೃತ್ಯಸ್ಯ ಭೃತ್ಯ ಇತಿಮಾಂ" ಇತ್ಯೇವ ಲಕ್ಷಣ ಸಂಯುಕ್ತಂ ಅರ್ಚಕಂ ವರಯೇತ್ ತತ:||" ಹಣಕ್ಕಾಗಿ,ಪ್ರತಿಷ್ಠೆಗಾಗಿ ತೋರಿಕೆಗಾಗಿ,ಆರಾಧಿಸದೆ "ಆತ್ಮಾರ್ಥಂ ಪೂಜಯೇತ್ ದೇವಂ"ಎಂಬಂತೆ ತನ್ನ ಆತ್ಮ ಉಧ್ಧಾರಕ್ಕಾಗಿಯೂ,ರಾಷ್ಟ್ರದ ಮಂಗಲಕ್ಕಾಗಿಯೂ,ಭಕ್ತರಒಳಿತಿಗಾಗಿಯೂ,ತಾನು ಪೂಜಿಸುತ್ತಿರುವೆನೆಂಬ ಮನೋಭೂಮಿಕೆ ಅರ್ಚಕದ್ದಿರಬೇಕು."ಪ್ರತಿಮಾಯಾಶ್ಚಯೇ ದೋಷಾಹ್ಯರ್ಚಕಸ್ಯ ತಪೋಬಲಾತ್|ಸರ್ವತ್ರೇಶ್ವರ ಚಿತ್ತಸ್ಯನಾಶಂ ಯಾಂತಿಕ್ಷಣಾತ್ಕಿಲಂ||"{ಶುಕ್ರ ನೀತಿ} ಅಂದರೆ ಒಂದು ವೇಳೆ ಪ್ರತಿಮೆ,ಬಿಂಬ,ವಿಗ್ರಹಗಳಲ್ಲಿ ದೋಷವಿದ್ದಲ್ಲಿ ಅರ್ಚಕರ ತಪೋ ಬಲದಿಂದ ನಾಶವಾಗುವುದು.ಆದ ಕಾರಣ ಅರ್ಚಕನು ಅವಶ್ಯವಾಗಿ ತಪಸ್ವಿಯಾಗಿರಲೇಬೇಕು.

      ಆಲಯ ನಿತ್ಯಾರ್ಚನ ಸಂಹಿತೆಯಲ್ಲಿ"ದೃಷ್ಟ್ವಾರಣ್ಯೇ ಮಹಾವ್ಯಾಘ್ರಂ ಭೀತೋಭವತಿ ಮಾನವ:|ಅರ್ಚಕಂ ಮಂತ್ರಹೀನಂತು ತಥಾ ಭೀತೋ ಜನಾರ್ಧನ:| ಆಗಮ್ಯಮಾನಂ ಮತ್ತೇಭಂ ವಿಹ್ವಲಾಂಗೋ ಯಥಾ ನರ:| ಮಂತ್ರಹೀನಂ ತಥಾ ಪಶ್ಯನರ್ಚಕಂ ವಿಹ್ವಲೋ ಹರಿ:||"ಎಂದು ಹೇಳಿರುತ್ತದೆ.ಅಂದರೆ ಕಾಡಿನಲ್ಲಿ ಹುಲಿಯನ್ನು ಕಂಡ ಮಾನವನಂತೆ,ಮದಿಸಿದ ಆನೆಯನ್ನು ಕಂಡು ದಿಕ್ಕೆಟ್ಟವನಂತೆ,ಸಿಂಹದ ನೆರಳನ್ನು ಕಂಡುಬೆವರಿದ ಆನೆಯಂತೆ ಮಂತ್ರಹೀನನಾದ ಅರ್ಚಕನನ್ನು ಕಂಡು ಪರಮಾತ್ಮ ಭಯಭೀತಗೊಳ್ಳುತ್ತಾನೆ ಎಂಬುದು ಭಾವಾರ್ಥ. ಇದರಿಂದಾಗಿಯೇ ಹೇಳುತ್ತಾರೆ "ಅರ್ಚಕಸ್ಯ ಪ್ರಭಾವೇನ ಶಿಲಾ ಭವತಿ ಶಂಕರ:".

      ದೇವಾಲಯಗಳಲ್ಲಿ ಅರ್ಚಕರ ಹಿರಿಮೆಗರಿಮೆಗಳಿಗೆ ಸಮಾನವಾದ ಪಾತ್ರ ಧರ್ಮದರ್ಶಿ ಸಮಿತಿ ಅಥವಾ ಆಢಳಿತಮಂಡಳಿಯದ್ದು.ಅರ್ಚಕರು ಹಾಗೂ ಧರ್ಮದರ್ಶಿ ಮಂಡಳಿ ದೇವಾಲಯಕ್ಕೆ ಕಣುಗಳಿದ್ದಂತೆ.ಧರ್ಮಕರ್ತರಬಗ್ಗೆ ಹೇಳುತ್ತಾ ಶಾಸ್ತ್ರಗಳು ಅವರು ಸದಾಚಾರಿಗಳು,ಶ್ರೋತ್ರೀಯ ಬ್ರಹ್ಮಜ್ಞಾನಿಗಳು, ಸತ್ಯವಾದಿಗಳು,ಪಾಪಬೀರುಗಳು,ಶಾಸ್ತ್ರಗಳಬಗ್ಗೆ ಪರಿಣತಿಯುಳ್ಳವರು,ಆಸ್ತಿಕರೂ ಆಗಿದ್ದು ಧರ್ಮನಿರತರಿರಬೇಕೆಂದು ಹೇಳಿದೆ. ಮುಂದುವರಿಸುತ್ತಾ ಅವರು "ಪರದಾರಾ ಧನಾಕಾಂಕ್ಷಾ ವರ್ಜಂತೋ ವೃದ್ಧಯೇವಚ" ಅಂದರೆ ಪರವಧು,ಪರಧನಗಳಬಗ್ಗೆ ನಿರ್ಲಿಪ್ತನಾಗಿ ಪಂಚಸಂಸ್ಕಾರಿಯಾಗಿ,ದೀನರಲ್ಲಿ ಕೃಪೆಯುಳ್ಳವನಾಗಿ ಉತ್ತಮ ವಂಶದಲ್ಲಿ ಜನಿಸಿದ್ದು ಭಕ್ತಶ್ರೇಷ್ಠನಾಗಿರಬೇಕು.ಪಂಡಿತನಾಗಿದ್ದು ಕಾರ್ಯಸಾಧಕತ್ವವನ್ನು ಹೊಂದಿ, ದಕ್ಷನೂ,ಧೈರ್ಯಶಾಲಿಯೂ, ವಿವೇಕಿಯೂ ಆಗಿರುವ ಸಜ್ಜನನಿರಬೇಕು.ಹಸ್ತ,ಕ್ರಿಯಾ,ಮನೋಶುದ್ಧಿಯುಳ್ಳವನಿರಬೇಕು.ಆಢಳಿತದ ವಿಚಾರದಲ್ಲಿ ಎಚ್ಚರಿಕೆಯಲ್ಲಿದ್ದು, ಕಾಲಕಾಲಕ್ಕೆ ನಿತ್ಯನೈಮಿತ್ತಿಕಾದಿಗಳನ್ನು ನಡೆಯಿಸುವ ಹೊಣೆಯುಳ್ಳವನಾಗಿರಬೇಕು.ಭಕ್ತರ,ಸೇವಾಸಕ್ತರ,ನೌಕರರ ಬಗ್ಗೆ ಆದರಣೀಯ ಭಾವನೆ ಹೊಂದಿರಬೇಕು.ಪೂಜಾ ಉತ್ಸವಾದಿ ಕಾಲಗಳಲ್ಲಿ ಸ್ವಯಂ ಹಾಜರಿರಲು ಬಿಡುವುಳ್ಳವರಿರಬೇಕು.ಹೋಣೆಗಾರಿಕೆಯಲ್ಲಿ ಮುಂದಿದ್ದು ಫಲಾನುಭವದಲ್ಲಿ ಹಿಂದಿರುವವನಾಗಿದ್ದು ದೇವಾಲಯದ ಪ್ರಗತಿಯ ಬಗೆಗೆ ಸದಾ ಕಳಕಳಿ ಹೊಂದಿರಬೇಕು.ಆಢಳಿತಮಂಡಳಿ ಅಥವಾ ಧರ್ಮದರ್ಶಿ ಮಂಡಳಿ ತಮ್ಮ ಕರ್ತವ್ಯದಲ್ಲಿ ವಿಮುಖವಾದಲ್ಲಿ ಶಿಲೆಶಿಲೆಯಾಗಿ ಅಪರಿಹಾರ್ಯವಾದ ಮಹಾದೋಷ, ದೇವತಾಶಾಪಕ್ಕೆ ಈಡಾಗುವುದರೊಂದಿಗೆ ಅವರ ಸಂತತಿ ನಾಶವಾಗುತ್ತದೆಯೆಂದು ಶಾಸ್ತ್ರಗಳು ಸಾರುತ್ತಿವೆ.ಒಂದು ದೇವಾಲಯಕ್ಕೆ ಒಳ್ಳೆಯ ಅರ್ಚಕನು ಸಿಗುವುದು ಎಷ್ಟು ದುರ್ಲಭವೋ ಅಷ್ಟೇ ಕಷ್ಟ ಉತ್ತಮ ಆಢಳಿತಮಂಡಳಿ ದೊರಕುವುದು ಎಂಬುದು ಹಲವಾರು ದೇವಾಲಯಗಳಲ್ಲಿನ ಕಲಹಗಳ ಸುದ್ದಿಗಳ ಅವಲೋಕನದಿಂದ ತೀರ್ಮಾನಿಸಬಹುದಾಗಿದೆ ಎಂಬುದಿಲ್ಲಿ ಉಲ್ಲೇಖಿಸಬಹುದಾದ ವಿಚಾರ.


     ದೇವಾಲಯಕ್ಕೆ ಬರುವ ಭಕ್ತಾದಿಗಳು ಹೇಗಿರಬೇಕು,ಅವರುಗಳ ಕರ್ತವ್ಯಗಳೇನು?,ಅವರ ಯಾವ್ಯಾವ ಕಾರ್ಯಕ್ಕೆ ಏನು ಫಲಕಾದಿದೆ ಎಂಬುದನ್ನೂ ಶಾಸ್ತ್ರಗಳು ವಿಶದವಾಗಿ ತಿಳಿಯಪಡಿಸಿವೆ.ಅವುಗಳ ಕುರಿತು ಮನನ ಮಾಡಿಕೊಳ್ಳೋಣ.ದೇವಾಲಯಕ್ಕೆ ಬರುವ ಭಕ್ತಾದಿಗಳು ತ್ರಿಕರಣ{ಕಾಯಾ-ವಾಚಾ-ಮನಸ್ಸು}ಶುದ್ಧರಿದ್ದು ದೇವರಲ್ಲಿ ಶ್ರದ್ಧಾ ಭಕ್ತಿಯುಳ್ಳವರಿರಬೇಕು.ದೇವಾಲಯದ ಸಂಪ್ರದಾಯಗಳನ್ನು ಗೌರವಿಸುವಂತಹರಿರಬೇಕು.ದೇವರಲ್ಲಿ ಪೂರ್ಣನಂಬಿಕೆಯಿದ್ದು ಅರ್ಪಣಾಮನೋಭಾವನೆಯುಳ್ಳವನಿರಬೇಕು.ಪಾಪ-ಪುಣ್ಯಗಳ ಅರಿವು,ಪುನರ್ಜನ್ಮದಲ್ಲಿ ನಂಬಿಕೆ,ದಾನ ಧರ್ಮಗಳಲ್ಲಿ ಆಸಕ್ತಿ,ದೇವಾಲಯದ ಕಾರ್ಯಗಳಲ್ಲಿ ಪಾಲುಗೊಳ್ಳಲು ತೆರೆದ ಮನಸ್ಸು ಭಕ್ತನಿಗಿರಬೇಕು.ಆತ್ತಿತ್ತ ಓಡಾಡುವುದು,ಹರಟೆಕೊಚ್ಚುವುದು,ಲಲ್ಲೆ ಹೊಡೆಯುವುದು,ಕೀಟಲೆ,ನಿಂದನೆ ಮಾಡುವುದು, ಆತ್ಮಪ್ರಶಂಸೆ,ಬೂಟಾಟಿಕೆ,ಅತಿಯಾದ ಅಲಂಕಾರ,ಅಂಗಾಂಗಪ್ರದರ್ಶನ,ಹಾವಭಾವಪ್ರಕಟಣೆ,ಇವೆಲ್ಲವೂ ಭಕ್ತರಿಗೆ ಸಲ್ಲದ ಗುಣಗಳಾಗಿವೆ.ದೇವಾಲಯದ ಆವರಣದೊಳಗೆ ದೇವರ ಹೊರತಾಗಿ ಇತರರಿಗೆ ವಂದಿಸುವುದು,ಗುಡಿಯೊಳಗೆ ವಸ್ತ್ರ ಹೊದ್ದುಕೊಂಡು ಬರುವುದು,ಅಥವಾ ವಸ್ತ್ರ ಹೊದ್ದುಕೊಂಡು ನಮಸ್ಕರಿಸುವುದು ನಿಷಿದ್ಧಕಾರ್ಯಗಳು."ಸಪ್ತ ಜನ್ಮ ಭವೆತ್ಕುಷ್ಠ ಶ್ವಾನಯೋನೀ ಶತಂ ವ್ರಜೇತ್"ಎಂಬುದಾಗಿ ಇಂತಹಾ ಅಕಾರ್ಯಗಳಿಗೆ ಶಾಸ್ತ್ರಗಳಲ್ಲಿ ಫಲಹೇಳಿದೆ. ಜಾತಿ,ಮತ,ಕುಲ;ಬಡವ-ಬಲ್ಲಿದ;ನಮ್ಮವ-ಅನ್ಯರವ;ಧರ್ಮಕರ್ತ,ಅಧಿಕಾರಿ,ಹಣವಂತ;ದಾನಿ,ಪಂಡಿತ ಇತ್ಯಾದಿ ಭೇದಗಳಾಗಲೀ,’ನಾನು’ಎಂಬ ಅಹಂ ಆಗಲೀ ಸಲ್ಲದ ಕಾರ್ಯಗಳು.ದೇವಾಲಯಗಳಲ್ಲಿ ಎಲ್ಲರಿಗೂ ತೆರೆದಬಾಗಿಲು.ದೇವಾಲಯಕ್ಕೆ ಬರುವವರು ತ್ರಿಕರಣ ಶುದ್ಧರಾಗಿ ತಮ್ಮ ಕುಲ ಪದ್ಧತಿಯಂತೆ ವಿಭೂತಿ,ಚಂದನ,ಗಂಧ,ಕುಂಕುಮಾದಿಗಳನ್ನು ಧರಿಸಿರಬೇಕು. ಪಾದರಕ್ಷೆಗಳನ್ನು ಧರಿಸಿರಬಾರದು."ರಿಕ್ತ ಹಸ್ತೇ ನಗಂತವ್ಯ ದೇವತಾ ಗುರುಸನ್ನಿಧೌ"ಎಂಬುದನ್ನು ಪಾಲನೆಮಾಡಬೇಕು.ದೇವಾಲಯಗಳ ಕಟ್ಟುಪಾಡುಗಳ ಬಗ್ಗೆ ಗೌರವವಿದ್ದು,ಅದನ್ನು ಪಾಲಿಸಲು ಬದ್ಧನಿರಬೇಕು.ಕಂಬಳಿ,ಶಾಲು,ಅಂಗಿ ಹೊದ್ದುಕೊಂಡು ನಮಸ್ಕರಿಸಿದರೆ ಐದಾವರ್ತಿ ಚಂಡಾಲನಾಗಿ ಜನ್ಮವೆತ್ತುತ್ತಾನೆ ಎಂದು ಶಾಸ್ತ್ರಗಳಲ್ಲಿ ಹೇಳಿದೆ. ಗರ್ಭಮಂದಿರದ ಮುಂದೆ,ಸಮೀಪ,ಹಿಂದೆ,ಎಡಭಾಗ,ಜಪ,ಹೋಮಸ್ಥಳಗಳ ಸಮೀಪದಲ್ಲಿ ನಮಸ್ಕರಿಸಕೂಡದು ಎಂಬ ನಿಯಮವಿದೆ. "ಅಗ್ರೇತು ಮೃತ್ಯು| ಪೃಷ್ಠಭಾಗೇ ನಿರರ್ಥಕಂ|ವಾಮಭಾಗೇ ವಿಚಾರಂದ್ಯಾತ್|ದಕ್ಷಿಣೇ ಪ್ರಣವಂ ಕುರು||" ’ಬಲಭಾಗದಲ್ಲಿ ನಮಸ್ಕಾರ ಮಾಡು’ಎನ್ನುತ್ತವೆ ಶಾಸ್ತ್ರಗಳು.ದೇವಾಲಯಗಳಲ್ಲಿ ಶುಚಿತ್ವಕ್ಕೆ ಮಹತ್ವ ನೀಡಬೇಕು. ನಿಷಿದ್ಧ ಆಹಾರ-ಪಾನೀಯಗಳ ಸೇವನೆ ಮಾಡಿ ದೇವತಾ ದರ್ಶನಸಲ್ಲದು.


       ಇದೇ ರೀತಿಯಾಗಿ ದೇವಾಲಯಗಳಲ್ಲಿ ನಿದ್ರಿಸುವುದು,ಕಾಡುಹರಟೆ,ಕೋಪ-ದು:ಖಪ್ರದರ್ಶನ,ಕಲಹ,ಅನ್ಯವಿಚಾರಗಳ ಚರ್ಚೆ,ಮೈ ಮುರಿಯುವುದು,ಆಕಳಿಸುವುದು,ತಾಂಬೂಲ ಚರ್ವಣ,ಹೊಗೆಬತ್ತಿ ಸೇದುವುದು,ಪರಸ್ತ್ರೀಯರತ್ತ ನೋಟ,ನಿಷಿದ್ಧವಸ್ತುಗಳ ಮಾರಾಟ,ಹಿಂಸೆ,ನಿಷ್ಠುರ ನುಡಿ,ಅಟ್ಟಹಾಸ,ಸ್ವಪ್ರತಿಷ್ಠೆ,ಪರದೂಷಣೆ,ನಿಷಿದ್ಧ ಆಹಾರ-ಪಾನೀಯಗಳ ಸೇವನೆಯಂತಹಾ ಕಾರ್ಯಗಳು ಘನಘೋರ ಪಾತಕಗಳಿಗೆ ಸಮನಾಗಿ ಸಪ್ತಜನ್ಮ ಅಪರಿಹಾರ್ಯವಾದ ದೋಷಗಳೆಂದು ಶಾಸ್ತ್ರಗಳು ಹೇಳಿವೆ.ದೇವತಾ ಸಾನ್ನಿದ್ಧ್ಯಕ್ಕೆ ಬಂದವರನ್ನು ತೆಗಳುವುದು,ನಿಂದಿಸುವುದು,ದೇವತಾಕಾರ್ಯಗಳಲ್ಲಿ ಯಥಾಸಾಧ್ಯ ಭಾಗವಹಿಸುವಂತಹರವರನ್ನು ತಡೆಯುವುದು ಕುಲನಾಶಕ್ಕೆ ಕಾರಣವಾಗುತ್ತವೆಯೆಂದು ಶಾಸ್ತ್ರಗಳು ಎಚ್ಚರಿಸಿವೆ. ದೇವಾಲಯಗಳಲ್ಲಿ ವಸ್ತ್ರ ಆಭರಣಾದಿಗಳನ್ನು ಕದ್ದರೆ, ಯಮಪಾಶದ ಭಾದೆ, ಮತ್ತು ನರಕ ಯಾತನೆ, ವಾಹನಗಳನ್ನು ಅಪಹರಿಸಿದರೆ, ಹಾಳುಗೆಡವಿದರೆ ನರಕ ಜ್ವಾಲೆಯ ಶಿಕ್ಷೆ ಮತ್ತು ಪಿಶಾಚಿಯಾಗಿ ಅಲೆದು ಕೊನೆಗೆ ಗಾರ್ಧಭ ಜನ್ಮ, ಹೂವು, ಗಂದ ಇತ್ಯಾದಿಗಳನ್ನು ಕದ್ದರೆ ಯಮಯಾತನೆ ಅನುಭವಿಸಿ ಇಲಿಜನ್ಮ, ದೇವಾಲಯದಲ್ಲಿ ವ್ಯಾಯಾಮ,ಅಭ್ಯಂಗ ಮಾಡುವುದು,ದೇವರ ತೀರ್ಥದ ಹೊರತಾಗಿ ನಿಷೇಧಿತ ಪಾನೀಯಗಳ ಸೇವನೆಮಾಡುವುದರಿಂದ ಕುಲನಾಶವಾಗುತ್ತದೆ ಎಂದು ಶಾಸ್ತ್ರಕಾರರು ಸಾರಿರುವರು. ದೇವಾಲಯಕ್ಕೆ ಸಂಬಂಧಿಸಿದ ಪತ್ರ,ಪುಷ್ಪ,ಫಲ,ತೋಯ{ನೀರು},ನೆಲ,ಧನ,ಅನ್ನವನ್ನು ಸ್ವಾರ್ಥಕ್ಕಾಗಿ ಬಳಸಿಕೊಂಡವ ಇಪ್ಪತ್ತೊಂದು ಜನ್ಮಗಳ ರೌರವನರಕಕ್ಕೆ ಭಾಜನನಾಗುತ್ತಾನೆಂದು ಶಾಸ್ತ್ರಗಳು ಎಚ್ಚರಿಸಿವೆ."ಅನ್ಯೇಷ್ವಪಚಾರೇಷು ಸ್ಥೂಲ ಸೂಕ್ಷ್ಮೇಷು ಮಾನವಾ:| ಕೃತಿನ: ಪ್ರೇತ್ಯ ನರಕೇ ಪಶ್ಯಂತೇ ದು:ಖ ಭಾಗಿನ:" ಎಂದು ಋಷಿ,ಮುನಿಗಳು ತೀರ್ಮಾನಿಸಿರುತ್ತಾರೆ.ದೇವಾಲಯದ ನವೀಕರಣ ಕಾರ್ಯಗಳಿಗೆ ಅಡ್ಡಿಆತಂಕಗಳನ್ನು ಒಡ್ಡುವವರು ಜನ್ಮಾಂತರ ಸಹಸ್ರ ಪಾಪಯೋನಿಗಳಲ್ಲಿ ಜನ್ಮವೆತ್ತಿ ಕುಲನಾಶದೊಡನೆ ಅಪರಿಹಾರ್ಯವಾದ ಮಹಾದೋಷಗಳಿಗೆ ಭಾಜನರಾಗುತ್ತಾರೆ ಎಂದು ಹೇಳುತ್ತಾ ಕಲ್ಪಾಂತ ಪರ್ಯಂತ ಕ್ಷುದ್ರ ಜಂತುವಾಗಿ ಜನ್ಮವೆತ್ತುತ್ತಾರೆಂದು ಧರ್ಮ ಶಾಸ್ತ್ರಗಳು ಬೊಟ್ಟು ಮಾಡಿ ಹೇಳಿವೆ. ದೇವಾಲಯಗಳಲ್ಲಿ ಮಾಡಬಾರದ ಕಾರ್ಯಗಳಬಗ್ಗೆ ಒಂದು ಬೃಹತ್ ತಖ್ತೆಯನ್ನೇ ಮಾಡಬಹುದಾಗಿದ್ದು ಅವುಗಳ ಪೈಕಿ ಪ್ರಾಮುಖ್ಯವೆನಿಸಿದ ಅಕಾರ್ಯಗಳ ಬಗ್ಗೆ ಮಾತ್ರಾ ಇಲ್ಲಿ ನಮೂದಿಸಲಾಗಿದ್ದು ಇವುಗಳು ಸಾರ್ವಕಾಲಿಕವಾಗಿ ಎಲ್ಲಾ ದೇವಾಲಯಗಳಲ್ಲೂ ಸರ್ವಭಕ್ತಾದಿಗಳೂ ಆಚರಿಸಲ್ಪಡಲೇಬೇಕಾದವುಗಳೆಂದು ಸಂಹಿತೆಗಳು ಹೇಳಿವೆ.


          ಮುಂದುವರಿಸುತ್ತಾ ದೇವಾಲಯಗಳ ಆಚಾರ್ಯರುಗಳನ್ನು, ಅರ್ಚಕರನ್ನು ಗೌರವಿಸದಿರುವುದು,ಸಮೀಪದ ಆಲಯಗಳಿಗೆ ವಾಹನಗಳಲ್ಲಿ ತೆರಳುವುದು,ಪಾದರಕ್ಷೆಯೊಡನೆ ಗುಡಿಗಳ ಆವರಣ ಪ್ರವೇಶ,ಉತ್ಸವಗಳಲ್ಲಿ ನಮಸ್ಕರಿಸದಿರುವಿಕೆ, ಒಂದೇ ಕೈಯಿಂದ ನಮಸ್ಕರಿಸುವುದು,ದೇವತಾ ಸಾನ್ನಿದ್ಧ್ಯದಲ್ಲಿ ಅನ್ಯವ್ಯಕ್ತಿಗಳಿಗೆ ಸಲ್ಲದಗೌರವನೀಡುವುದು,ಗುಡಿಯೊಳಗೆ ಆತ್ಮ ಪ್ರಶಂಸೆ, ಅಶುಚಿಯಾದ ಕೈಗಳಿಂದ ನಮಸ್ಕಾರ,ಪೂಜಾ ವೇಳೆಯಲ್ಲಿ ದೇವರ ಹೊರತಾಗಿ ಅನ್ಯತ್ರ ನೋಟ,ದೇವರ ಎದುರು ಮೊಣಕಾಲು ಕಟ್ಟಿಕೂರುವುದು, ದೇವರ ಸಮೀಪ ಮಲಗುವುದು,ಇಲ್ಲವೇ ಕಾಲು ಚಾಚಿ ಕೂರುವುದು,ದೇವರ ಹತ್ತಿರ ಅಥವಾ ಎದುರು ಪ್ರಸಾದ ಸೇವನೆ,ಗುಡಿಯಲ್ಲಿ ಕಾಡುಹರಟೆ,ಅಶ್ಲೀಲ ಸಂಭಾಷಣೆ,ಗಟ್ಟಿಯಾಗಿ ಕಿರುಚುವುದು,ಅಳುವುದು,ಕೋಪ,ತಾಪ,ಅತಿಮುದ್ದು,ಕಲಹ,ದ್ವೇಷಸಾಧನೆ,ದೇವತಾಕಾರ್ಯಗಳನ್ನು ಮಾಡುವಾಗ ಅಡ್ಡಿಮಾಡುವುದು,ಒಬ್ಬರ ಮೇಲೆ ಕೃಪೆ,ಇನ್ನೊಬ್ಬರ ಬಗ್ಗೆ ದ್ವೇಷ, ಮಹಿಳೆಯರೊಡನೆ ಅನಾವಶ್ಯಕ ಪಟ್ಟಾಂಗ,ಆಡಬಾರದ ಕೀಳುನುಡಿ ನುಡಿಯುವುದು,ಬೆರಳು ,ಉಗುರು ಕಚ್ಚುವುದು,ಶಕ್ತಿಯಿದ್ದವರಿಂದ ಅತಿ ಕಡಿಮೆ ಸೇವೆ, ಅಶಕ್ತರಿಂದ ಶಕ್ತಿ ಮೀರಿದ ಸೇವೆ, ಅಪಕ್ವ ಪದಾರ್ಥಗಳ ಸೇವನೆ ಮತ್ತು ಸಮರ್ಪಣೆ, ದೇವರಿಗೆ ನಿವೇದಿಸುವ ಮೊದಲು ಪದಾರ್ಥಗಳ ಸ್ವೀಕಾರ, ಬಳಸಿದ ವಸ್ತುಗಳ ನಿವೇದನೆ, ಸೇವೆಗಳಲ್ಲಿ- ಆಡಂಬರ ಕಾರ್ಯಗಳಲ್ಲಿ ಭಾಗಿಗಳಾಗಲು ಉತ್ಸಾಹ, ಅತ್ತಿತ್ತ ಓಡಾಡುವುದು,ಹರಟೆ ಕೊಚ್ಚುವುದು,ಲಲ್ಲೆ ಹೊಡೆಯುವುದು,ಕೀಟಲೆ,ನಿಂದನೆ,ಕ್ಷುದ್ರದೇವತೆಗಳ ಸ್ತುತಿ,ಕಸಕಡ್ಡಿ ಹರಡುವಿಕೆ,ಪ್ರಸಾದ ತುಳಿಯುವಿಕೆ,ದೇವಾಲಯದ ಧರ್ಮದರ್ಶಿ ಮಂಡಳಿಯ ಎಲ್ಲಾ ಸದಸ್ಯರು ಉತ್ಸವಾದಿ ಸಮಸ್ತಕಾರ್ಯಗಳ ವೇಳೆ ಉಪಸ್ಥಿತರಿದ್ದು ಕಾರ್ಯಕ್ರಮಗಳ ಸುಗಮ ನಿರ್ವಹಣೆಗೆ ಗಮನ ಕೊಡದಿರುವುದು ದೇವಾಲಯಕ್ಕೆ ಬಂದ ಭಕ್ತಾದಿಗಳಿಗೆ ಪ್ರಸಾದ ವಿತರಣೆಗೆ ಮೊದಲು ಪ್ರಸಾದ ಸ್ವೀಕರಿಸುವುದು,ದೇವಾಲಯಕ್ಕೆ ಯಾ ದೇವರಿಗೆ ಸಂಬಂಧಿಸಿದಂತೆ ಯಾವುದಾದರೂ ಸೇವಾಕೈಂಕರ್ಯವನ್ನು ಸಂಕಲ್ಪಿಸಿ ಯಾ ವಾಗ್ದಾನ ಮಾಡಿ ನಂತರ ಮರೆತು ಬಿಡುವುದು ಅಥವಾ ಅನುಸರಿಸದಿರುವುದು ಪಂಚ ಮಹಾಪಾತಕ,ಉಪಪಾತಕಗಳ ಸಾಲಿಗೆ ಸೇರುತ್ತವೆ ಎಂದು ಬಹುತೇಕ ಧರ್ಮಗ್ರಂಥಗಳು ಪದೇಪದೇ ಭಕ್ತರನ್ನು ಎಚ್ಚರಿಸಿವೆ ಎಂಬುದು ಗಮನಾರ್ಹ.

        ಹಾಗೇನೇ ದೇವಾಲಯಗಳಲ್ಲಿ ಗುಡಿಸಿ ಸಾರಿಸಿದರೆ ಪಾಪವಿಮುಕ್ತಿ, ಸ್ವರ್ಗ ಪ್ರಾಪ್ತಿ, ದೇವಾಲಯಗಳಲ್ಲಿ ತೋಟ, ಪುಷ್ಪೋದ್ಯಾನ ನಿರ್ಮಿಸಿದಲ್ಲಿ ಇಷ್ಟಾರ್ಥ ಫಲ ಪ್ರಾಪ್ತಿ, ದೀಪ ಸೇಗೆ ನರಕೋದ್ಧರಣ ಜನ್ಮ ಪ್ರಾಪ್ತಿಯಾಗಿ ದು:ಖವಿಮುಕ್ತಿ, ತುಳಸಿ,ಪುಷ್ಪ, ಪತ್ರ ಸೇವೆಗೆ ಗೌರವ ಪ್ರಾಪ್ತಿ,ಅಭಿಷೇಕ ಸೇವೆಗೆ ವರುಣ ಲೋಕ ಸುಖ ಪ್ರಾಪ್ತಿ, ಭೂದಾನಕ್ಕೆ ಸ್ವರ್ಗಲೋಕ,ಬಾವಿ,ಕೊಳ ನಿರ್ಮಿಸಿದವರಿಗೆ ಅರಿಷ್ಠ ನಿವಾರಣೆಯಾಗಿ ಸಕಲ ಸಮೃದ್ಧಿ, ದೇವಾಲಯಗಳ ನವೀಕರಣಕ್ಕೆ ವೈಕುಂಠ ಲೋಕ ವಾಸ ಪ್ರಾಪ್ತಿ, ದೇವಳಗಳಿಗೆ ಧನ,ಕನಕ,ಧೂಪ,ತೈಲ,ತಂಡುಲ,ನಾರೀಕೇಳ,ಅಗರು ಚಂದನಾದಿಗಳನ್ನು ಯಥಾವತ್ ಪೂರೈಸುವವರಿಗೆ,ದೇವಾಲಯದ ಉತ್ಸವಾದಿಗಳ ಸಮಯದಲ್ಲಿ ನಿಷ್ಕಾಮರಾಗಿ ಶ್ರಮಿಸುವ ಭಕ್ತರಿಗೆ ಶಾಶ್ವತವಾದ ಉತ್ತಮಲೋಕ ಪ್ರಾಪ್ತಿಯಾಗಿ ಮೋಕ್ಷಎಂಬುದಾಗಿ ಎಂದು ಸಂಹಿತೆಗಳಲ್ಲಿ ಉಲ್ಲೇಖಿಸಲಾಗಿದೆ. ಅದೇ ರೀತಿ ಸಂಗೀತಸೇವೆ,ವಾದ್ಯ ಸೇವೆ,ವಸ್ತ್ರಾದಿ ಅರ್ಪಣೆ,ಆಭರಣ,ಧೂಪ,ದೀಪ,ತೈಲ,ಭಕ್ಷ್ಯ,ಭೋಜ್ಯ,ಪಾನೀಯ,ವಾಹನಗಳ ಪೂರೈಕೆ ಯಾ ದಾನಕ್ಕೆ ಅತಿಶಯವಾದ ಶುಭ ಫಲಗಳನ್ನು ಶಾಸ್ತ್ರಗಳುಹೇಳಿವೆ. ದೇವಾಲಯಗಳಲ್ಲಿ ಪೂಜಾ ಉತ್ಸವಗಳ ಕಾಲದಲ್ಲಿ ಶಂಖ,ಗಂಟೆ,ಜಾಗಟೆ,ನಗಾರಿ,ತಾಳ, ಮೃದಂಗಾದಿಗಳನ್ನು ಬಾರಿಸುವವರಿಗೆ,ಮಂಗಲಾರತಿಯನ್ನು ಅಲ್ಲಿ ಸೇರಿದ ಭಕ್ತರಿಗೆ ಒಡ್ಡುವವರಿಗೆ"ಸಪ್ತ ಜನ್ಮ ಕೃತಂ ಪಾಪಂ ಕ್ಷಣ ಮಾತ್ರ ವಿನಶ್ಯತಿ"ಎಂದಿವೆ ಧರ್ಮ ಶಾಸ್ತ್ರಗಳು.


         ದೇವಾಲಯಗಳಿಗೆ ಬೇಕಾದ ಆನೆ,ಕುದುರೆ,ಗರುಡ,ಶೇಷವಾಹನ,ಛತ್ರಿ,ಛಾಮರ,ಪಾದುಕೆ ಕನ್ನಡಿಯಾದಿಯಾಗಿ ಉಪಚಾರವಸ್ತುಗಳು,ದ್ವಜ,ಪತಾಕೆ,ತೋರಣಾದಿ ಅಲಂಕಾರಿಕ ವಸ್ತುಗಳು,ಭೇರ‍ಿ,ಗಂಟೆ,ಜಾಗಟೆ,ಧೂಪ,ದೀಪ,ನೈವೇದ್ಯ ಪಾತ್ರಗಳೇ ಮೊದಲಾದ ಆರಾಧನಾ ಪಾತ್ರಗಳು,ವಿವಿಧ ಆರತಿಗಳು,ತ್ರಿಪಾದಪೀಠ,ಕಾಲುಮಣೆ ಇತ್ಯಾದಿ ಆಸನಗಳು,ಪೂಜಾದ್ರವ್ಯ,ಅಲಂಕಾರಿಕ ವಸ್ತುಗಳ ಸಂಗ್ರಹ ಮತ್ತು ಜೋಪಾನಕ್ಕಾಗಿ ಕವಾಟು,ಭಕ್ತಾದಿಗಳ ಕಾಣಿಕೆ ಶೇಖರಿಸುವ ಹುಂಡಿ,ದೇವದಂಡ, ಪಲ್ಲಕ್ಕಿಇತ್ಯಾದಿಯಾಗಿ ಮಾರ್ಕಾಡೇಯಸಂಹಿತೆಯಲ್ಲಿ ಹೇಳಿದ ವಸ್ತುಗಳನ್ನು ಯಥಾಶಕ್ಯ,ಯಥಾಭಕ್ತ್ಯಾ ಯಾವಾತನು ಪೂರೈಸುತ್ತಾನೋ ಭೂಲೋಕದಲ್ಲಿ ಅವನ ಕುಟುಂಬಸಮಸ್ತರು ಉತ್ತರೋತ್ತರ ಅಭಿವೃದ್ಧಿಹೊಂದುವುದರೊಂದಿಗೆ ಕೊನೆಯಲ್ಲಿ ದೇವಲೋಕ ಸುಖವಾಸ ಪ್ರಾಪ್ತಿಯಾಗುತ್ತದೆಯೆಂದು ಗ್ರಂಥಗಳಲ್ಲಿ ಹೇಳಿದ್ದಿದೆ.

         ಒಟ್ಟಿನಲ್ಲಿ ದೇವಾಲಯಗಳಿಗೆ ಬಂದವರಿಗೆ ಶಾಂತಿಯೆಂಬ ತೀರ್ಥವೂ,ಸಮಾಧಾನವೆಂಬ ಪ್ರಸಾದವೂ, ದೊರಕುವಂತಾಗಬೇಕಾದುದು ಅತೀ ಅವಶ್ಯ.ಇದಕ್ಕಾಗಿ ಪ್ರಶಾಂತವಾದ, ಭಕ್ತಿಸಂಪನ್ನ ವಾತಾವರಣವಿರಬೇಕಾದುದು ಮುಖ್ಯ. ದೇವಾಲಯಗಳು ಮಾನವನ ಏಕಾಗ್ರತೆಯ ತಾಣಗಳಾಗಬೇಕು. ಗುಡಿಗೆ ಬಂದ ಭಕ್ತರಿಗೆ ಯಾವ ರೀತಿಯಲ್ಲೂ ಅಪಚಾರವಾಗಬಾರದು.ಭಕ್ತರಿಂದಲೂ ದೇವಾಲಯಗಳ ಕಟ್ಟುಪಾಡುಗಳ ಉಲ್ಲಂಘನೆಯಂತಹಾ ಅಪಚಾರವಾಗಬಾರದು.ದೇವಾಲಯಗಳಲ್ಲಿ ನೆಮ್ಮದಿಯ ಕಡಲು ಕದಡಬಾರದು.ಜ್ಞಾನಿ-ಅಜ್ಞಾನಿ; ಶಕ್ತ-ಅಶಕ್ತ; ಪಂಡಿತ-ಪಾಮರ; ಆ ಜಾತಿ-ಈ ಜಾತಿ ಇತ್ಯಾದಿ ತಾರತಮ್ಯಗಳಿಗೆ ಹೊರತಾದ ವಾತಾವರಣ ತುಂಬಿ ದು:ಖ-ದುಮ್ಮಾನಗಳು ದೂರವಾಗಿ ಆಶೆ-ಆಕಾಂಕ್ಷೆಗಳು ಕೈಗೂಡಿ ಸುಖ ಸದ್ಗತಿಗಳ ಪ್ರಾಪ್ತಿಗಾಗಿ ದೇವರ ಬಗ್ಗೆ ಚಿಂತನೆ,ಸೇವೆ, ಆರಾಧನೆಗಳಿಗಾಗಿ ದೇವಾಲಯಗಳು ಎದ್ದುನಿಲ್ಲಬೇಕು. ಅಲ್ಲಿ ದೇವತಾ ಸಾನ್ನಿಧ್ಯ ಬೆಳಗಬೇಕು. ಹಾಗಾಗಲು ದೇವಾಲಯಗಳಿಗೆ ಆಚಾರ ಸಂಹಿತೆಯಿರಬೇಕು.

         ನಮ್ಮ ಧರ್ಮ ಸಂಸ್ಕೃತಿಗಳೆಂಬ ದೀಪವನ್ನು ಜ್ವಲಂತವಾಗಿರಿಸಲು ಸಮಾಜದ ಐಕ್ಯತೆಯ ರಕ್ಷಣೆಗಾಗಿ,ಸಮಾಜದ ಸರ್ವತೋಮುಖ ಏಳಿಗೆಗಾಗಿ ದೇವಾಲಯಗಳು ಕೇಂದ್ರಬಿಂದುಗಳಾಗಿ ಬಿಂಬಿಸುವಂತಾಗಲು ಇಂದಿನ ದಿನಗಳಲ್ಲಿ ಅರ್ಚಕರುಗಳೂ, ಧರ್ಮದರ್ಶಿ ಮಂಡಳಿ ಸದಸ್ಯರುಗಳೂ,ಭಕ್ತಜನ ಸಮೂಹವೂ ಸ್ವಾರ್ಥತೆಯ ಆವರಣದಿಂದ ಹೊರಬಂದು ದೇವತಾ ಸಾನಿದ್ಧ್ಯ ಬೆಳಗಲು ಕರ್ತವ್ಯ ಪರಾಯಣರಾಗಲಿ. ಆ ದಿನಗಳು ನಾಡಿನೆಲ್ಲೆಡೆ ಬಹುಬೇಗನೆ ಬರಲೆಂದು ಸರ್ವೇಶ್ವರನಲ್ಲಿ ನಮ್ಮ ಪ್ರಾರ್ಥನೆಯಾಗಲಿ.


                                                ಸತ್ಯಮ್      ಶಿವಮ್       ಸುಂದರಮ್